ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಉಂಟಾಗುವ ಶಂಕೆ ವ್ಯಕ್ತವಾಗಿರುವುದರಿಂದ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮುಂಬೈ ಪೋಲಿಸ್ ಮೂಲಗಳು ತಿಳಿಸಿವೆ.
ನಟನಿಗೆ ಪಾತಕಿಯಿಂದ ನೇರವಾಗಿ ಬೆದರಿಕೆ ಕರೆ ಬಂದಿಲ್ಲವಾದರೂ, ಅವರ ಆಪ್ತ , ಉದ್ದಿಮೆ ಪಾಲುದಾರ ಅಲಿ ಮೊರಾನಿಯವರ ಮನೆ ಮೇಲೆ ಶನಿವಾರ ಪಾತಕಿಗಳ ಕಡೆಯವರು ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ , ಅದು ಶಾರುಖ್ ಅವರಿಗೆ ರವಿ ಪೂಜಾರಿ ನೀಡಿದ ಬೆದರಿಕೆಯ ಸಂಖೇತ ಎಂದು ಪರಿಗಣಿಸಿರುವ ಪೋಲಿಸರು ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸಿದ್ದಾರೆ. ಸಾರ್ವಜನಿಕ ವ್ಯಕ್ತಿಗಳನ್ನು ಬೆದರಿಸಿ ಜನಪ್ರಿಯತೆಯನ್ನು ಪಡೆಯಲು ಪ್ರಯತ್ನಿಸುವುದು ರವಿ ಪೂಜಾರಿಯ ಹಳೇ ಚಾಳಿ.
ಕಳೆದ ಶನಿವಾರ ರಾತ್ರಿ 10 ಗಂಟೆಗೆ ಅಲಿ ಮೊರಾನಿಗೆ ಪಾತಕಿಗಳ ಕಡೆಯಿಂದ ಬೆದರಿಕೆ ಕರೆ ಬಂದಿತ್ತು . ಆ ಸಮಯದಲ್ಲಿ ಅವರು ದುಬೈಗೆ ಹೊರಟಿದ್ದರು. ಅದೇ ರಾತ್ರಿ 10.30 ರ ಸುಮಾರಿಗೆ ಮುಂಬೈನ ಜುಹುನಲ್ಲಿರುವ ಅವರ ಮನೆ ಹೊರಗೆ ಪೂಜಾರಿ ಸಹಚರರು 5 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂಬೈನ ಬಾಂದ್ರದಲ್ಲಿರುವ ಶಾರುಖ್ ಮನೆಗೆ ನೀಡಲಾಗಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಒಬ್ಬ ಪೋಲಿಸ್ ನಿರೀಕ್ಷಕರು ಸೇರಿದಂತೆ 5 ಜನ ಪೋಲಿಸರನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ.