ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮತ್ತು ನಿಗದಿಯಾದ ಇತರ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಾದ ಅವಸರದ ಬೆಳಗಿನ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಹೃದಯ ಭಾಗದಲ್ಲಿರುವ ಪೋಲಿಸ್ ಠಾಣೆಗೆ ಆಕಸ್ಮಿಕ ಭೇಟಿ ನೀಡಿದರು.
ಆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲೇ ಬರುವ ಮಂದಿರ್ ಮಾರ್ಗ್ ರಸ್ತೆಯಲ್ಲಿ ಮೋದಿ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಪೋಲಿಸ್ ಠಾಣೆಯ ಅಧಿಕಾರಿಗಳೆಲ್ಲರೂ ಆ ಸ್ಥಳದಲ್ಲಿ ನಿಯೋಜನೆಗೊಂಡಿದ್ದರು. ಹಾಗಾಗಿ ಪ್ರಧಾನಿ ಆಗಮಿಸಿದ ಸಮಯದಲ್ಲಿ ಠಾಣೆಯಲ್ಲಿ ಅಧಿಕಾರಿಗಳಿರಲಿಲ್ಲ.
ಪೋಲಿಸ್ ಠಾಣೆಯನ್ನು ಸ್ವಚ್ಛಗೊಳಿಸಿದ ಪ್ರಧಾನಿ ಅಲ್ಲಿದ್ದ ಪೋಲಿಸ್ ಪೇದೆಗಳ ಬಳಿ ಸ್ವಚ್ಛತೆ ಅತಿ ಮಹತ್ವವಾದದ್ದು ಎಂದು ಹೇಳಿದರು.
ನಂತರ ನೈರ್ಮಲ್ಯ ಕಾರ್ಮಿಕರು ವಾಸವಾಗಿರುವ ವಾಲ್ಮಿಕಿ ಬಸ್ತಿಗೆ ತೆರಳಿದ ಮೋದಿ ಅಲ್ಲಿನ ರಸ್ತೆಗಳಲ್ಲಿ ಕಸ ಗುಡಿಸುವ ಮೂಲಕ ತಮ್ಮ ಮಹಾತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.
ಅಲ್ಲಿದ್ದ ದೇವಸ್ಥಾನಕ್ಕೆ ಮತ್ತು ಮಹಾತ್ಮಾ ಗಾಂಧಿ ನೆಲಸಿದ್ದ ಮನೆಯೊಂದಕ್ಕೆ ಮೋದಿ ಭೇಟಿ ನೀಡಿದರು.
ಬಾಪುಜಿಯವರ 145 ನೇ ಜನ್ಮದಿನವಾದ ಇಂದು ಮೋದಿ ತಮ್ಮ ಮತ್ತು ಗಾಂಧೀಜಿಯವರ ಕನಸಿನ ಸ್ವಚ್ಛ ಭಾರತ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು. ಈ ಅಭಿಯಾನ 5 ವರ್ಷಗಳಲ್ಲಿ ಭಾರತವನ್ನು ನಿರ್ಮಲ ದೇಶವನ್ನಾಗಿಸುವ ಗುರಿಯೊಂದಿಗೆ ಮುನ್ನಡೆಯಲಿದೆ.
ನಂತರ ಇಂಡಿಯಾ ಗೇಟ್ನಲ್ಲಿ ಮಾತನಾಡಿದ ಮೋದಿ, ದೇಶವಾಸಿಗಳನ್ನು ಸ್ವಚ್ಛತೆಯ ಕಡೆಗೆ ಪ್ರೇರೇಪಿಸಿದರು.