ಪ್ರಧಾನಿ ಮೋದಿ ಇಂದು ಗೋವಾ ಮತ್ತು ಬೆಳಗಾವಿಗೆ ಭೇಟಿ ನೀಡಿದ್ದಾರೆ. ಗೋವಾದ ಮೋಪಾ ಫೋಟೋದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅಡಿಗಲ್ಲನ್ನಿಟ್ಟು ಮಾತನಾಡಿದ ಅವರು ಭಾವುಕರಾಗಿದ್ದು ಕಂಡು ಬಂತು. ಗದ್ಗದಿಸುತ್ತ ಮಾತನಾಡಿದ ಅವರು
ದೇಶಕ್ಕಾಗಿ ನನ್ನ ಮನೆಮಠ ತ್ಯಜಿಸಿದ್ದೇನೆ. ಕುರ್ಚಿಯ ಆಶೆಯಿಂದಲ್ಲ ಎಂದರು. ನೋಟು ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿ ಅವರು ಮೌನ ಮುರಿದರು.
ಅವರ ಭಾಷಣದ ಮುಖ್ಯಾಂಶಗಳು ಹೀಗಿವೆ:
* ಕೆಲವು ಶಕ್ತಿಗಳು ನನ್ನ ವಿರುದ್ಧ ಇವೆ. ಅವರು ಬಹುಶಃ ನನ್ನನ್ನು ಬದುಕಲು ಬಿಡಲಾರರು. ಕಳೆದ 70 ವರ್ಷದಿಂದ ದೇಶವನ್ನು ಲೂಟಿ ಹೊಡೆದ ಅವರು ನನ್ನನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ. ನಾನು ಎಲ್ಲವನ್ನು ಎದುರಿಸಲು ತಯಾರಾಗಿದ್ದೇನೆ.
* 70 ವರ್ಷದಿಂದ ಇರುವ ಭ್ರಷ್ಟಾಚಾರದ ಕಾಯಿಲೆಯನ್ನು ಬೇರುಸಮೇತ ಕಿತ್ತೊಗೆಯೋಣ. ಕಠಿಣ ನಿರ್ಧಾರದಿಂದ ಜನರು ಪಡುತ್ತಿರುವ ಕಷ್ಟವನ್ನು ನೋಡುತ್ತಿದ್ದರೆ ನನಗೆ ನೋವಾಗುತ್ತಿದೆ. ಅಹಂಕಾರ ಹಾಗೂ ಸರ್ವಾಧಿಕಾರದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಕೂಡ ಬಡತನ ಹಾಗೂ ಕಷ್ಟವನ್ನು ನೋಡಿದ್ದೇನೆ.
* ದೊಡ್ಡ ದೊಡ್ಡ ಹಗರಣಗಳಲ್ಲಿ ತೊಡಗಿಕೊಂಡವರೀಗ 4,000 ರೂಪಾಯಿ ವಿನಿಮಯ ಮಾಡಿಕೊಳ್ಳಲು ಸಾಲಿನಲ್ಲಿ ನಿಲ್ಲುತ್ತಿದ್ದಾರೆ
* ಭ್ರಷ್ಟಾಚಾರದ ವಿರುದ್ಧ ಹೋರಾಡುವ ನನ್ನ ವಾಗ್ದಾನವನ್ನು ಉಳಿಸಿಕೊಂಡಿದ್ದೇನೆ.ಕಪ್ಪು ಹಣದ ನಿರ್ಮೂಲನೆಗೆ ಪಣ ತೊಟ್ಟಿದ್ದೇನೆ, ಅದಕ್ಕಾಗಿ ಡಿಸೆಂಬರ್ 30ವರೆಗೂ ಸಹನೆಯಿಂದ ಕಾದು ನೋಡಿ. ಆ ಬಳಿಕ ನನ್ನ ನಿರ್ಧಾರ ತಪ್ಪು ಅನಿಸಿದರೆ ಯಾವುದೇ ಶಿಕ್ಷೆಗೆ ಬೇಕಾದರೂ ನಾನು ಸಿದ್ಧ.
* ನನ್ನ ಕುರ್ಚಿ ಕಾಪಾಡಿಕೊಳ್ಳುವಲ್ಲಿ ಆಸಕ್ತನಲ್ಲ. ನನ್ನ ಸರ್ಕಾರ ಬಡವರನ್ನು ಮೇಲೆತ್ತಲಿದೆ.
* ನಮಗೆ ಅಂಟಿರುವ ರೋಗದ ಪಾಲನ್ನು ಯುವ ಜನಾಂಗಕ್ಕೆ ಯಾಕೆ ನೀಡಬೇಕು? ರಾಜಕೀಯ ಯಾರಿಗೆ ಬೇಕೋ ಅವರು ಸ್ವತಂತ್ರವಾಗಿ ಮಾಡಲಿ.
* ಭಾರತದಲ್ಲಿ ಲೂಟಿಯಾಗಿರುವ ಹಣ ಭಾರತಕ್ಕೆ ಸಿಗಬೇಕಿದೆ. ಅದನ್ನು ಕಂಡುಹಿಡಿಯಬೇಕಾದದ್ದು ನಮ್ಮ ಕರ್ತವ್ಯ.ನಮ್ಮ ಸರ್ಕಾರದ ಮೇಲೆ ಜನರಿಗೆ ಬಹಶಷ್ಟು ನಿರೀಕ್ಷೆಗಳಿವೆ.
*ನವೆಂಬರ್ 8 ರಂದು ತೆಗೆದುಕೊಂಡ ಕಠಿಣ ನಿರ್ಧಾರದಿಂದ ಬಹುತೇಕ ಭಾರತೀಯರು ಕಣ್ಣು ಮುಚ್ಚಿ ನೆಮ್ಮದಿಯಿಂದ ನಿದ್ರೆ ಮಾಡಿದ್ದಾರೆ. ಆದರೆ ಕೆಲವರಿಗೆ ಇಂದಿಗೂ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ.
*ನನ್ನ ಮುಂದಿನ ಗುರಿ ಬೇನಾಮಿ ಆಸ್ತಿ ಹೊಂದಿರುವವರು. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯದೇ ಬಿಡಲಾರೆ. ಜನರ ಕಷ್ಟ ಅರ್ಥವಾಗುತ್ತದೆ. ಕೇವಲ 50 ದಿನ. ಒಮ್ಮೆ ಸ್ವಚ್ಛತಾ ಕಾರ್ಯ ಮುಗಿದರೆ ಸೊಳ್ಳೆಗಳು ಹತ್ತಿರ ಬರುವುದಿಲ್ಲ.