ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಪರಿಸರದ ವಿಷಯವನ್ನು ಪ್ರಸ್ತಾಪಿಸಿದರು. ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕೆ ಪ್ಯಾರಿಸ್ಗೆ ನಿರ್ಗಮಿಸುವುದಕ್ಕೆ 2 ಗಂಟೆಗಳ ಮುಂಚಿತವಾಗಿ ಮೋದಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಕಳವಳಕಾರಿ ವಿಷಯಗಳು ಎಂದು ಪ್ರಧಾನಿ ಹೇಳಿದರು.
ಹೆಚ್ಚುತ್ತಿರುವ ತಾಪಮಾನವನ್ನು ನಿಲ್ಲಿಸಲು ಇಂಧನ ಸಂರಕ್ಷಣೆಯು ಮೊದಲ ಪರಿಹಾರವಾಗಿದ್ದು, ಇದು ಎಲ್ಲರ ಜವಾಬ್ದಾರಿ ಎಂದು ನುಡಿದರು. ಡಿ. 14 ರಾಷ್ಟ್ರೀಯ ಇಂಧನ ಸಂರಕ್ಷಣೆ ದಿನ. ಇಂಧನ ಸಂರಕ್ಷಣೆಗೆ ಅನೇಕ ಸರ್ಕಾರಿ ಯೋಜನೆಗಳಿವೆ ಎಂದು ಹೇಳಿ ಎಲ್ಇಡಿ ಬಲ್ಬ್ ಯೋಜನೆಯನ್ನು ಹೆಸರಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಾನ್ಪುರ ನಿವಾಸಿ ನೂರ್ ಜಹಾನ್ ಸೌರ ಶಕ್ತಿಯನ್ನು ಬಳಸಿಕೊಂಡು ಬಡವರಿಗೆ ವಿದ್ಯುತ್ ನೀಡುವ ಮೂಲಕ ನೆರವಾಗುತ್ತಿರುವ ವಿಷಯ ಪ್ರಸ್ತಾಪಿಸಿದರು.
ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಯ ಬಗ್ಗೆ ಪ್ರಧಾನಿ ವಿಷಾದ ಸೂಚಿಸಿ ರೈತರಿಗೆ ನಾವು ನಿಮ್ಮ ಜತೆಗಿದ್ದೇವೆ ಎಂದು ಭರವಸೆ ನೀಡಿದರು.