ನವದೆಹಲಿ:ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ ಆರಂಭವಾದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 32ನೇ ಅವತರಣಿಕೆಯಲ್ಲಿ ಮಾತನಾದಿದ ಅವರು, ರಂಜಾನ್ ಆರಂಭದ ಈ ಶುಭ ಸಂದರ್ಭದಲ್ಲಿ ಜಗತ್ತಿನ ಎಲ್ಲರಿಗೂ ಶುಭಾಶಯಗಳು. ದೇಶದ ಮುಸ್ಲಿಂ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳು. ಭಾರತವು ಧಾರ್ಮಿಕ ವೈವಿಧ್ಯತೆಯುಳ್ಳ ದೇಶ. ವೈವಿಧ್ಯತೆ ಎಂಬುದು ನಮ್ಮ ಶಕ್ತಿ. ಎಲ್ಲ ಧರ್ಮಗಳ ಮತ್ತು ನಂಬಿಕೆಗಳ ಜನರು ಇಲ್ಲಿ ಜತೆಯಾಗಿ ಶಾಂತಿಯಿಂದ ಜೀವನ ನಡೆಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ’ ಎಂದು ಹೇಳಿದರು.
ಜೂನ್ 5 ವಿಶ್ವ ಪರಿಸರ ದಿನ. ಭೂಮಿ ನಮ್ಮ ತಾಯಿ. ನಾವೆಲ್ಲ ಅದರ ಮಕ್ಕಳು. ಪ್ರಕೃತಿಯೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿ ಉತ್ತಮ ಭೂಮಿಯನ್ನು ನಮ್ಮದಾಗಿಸೋಣ. ನಮ್ಮ ಪೂರ್ವಿಕರು ಪ್ರಕೃತಿಯನ್ನು ರಕ್ಷಿಸಿದ್ದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಪರಿಸರ ರಕ್ಷಿಸುವುದನ್ನು ನಾವು ಮುಂದುವರೆಸಿದರೆ ಮುಂದಿನ ತಲೆಮಾರಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಜೂನ್ 21ರಂದು ವಿಶ್ವ ಯೋಗ ದಿನ. ಭಾರತ ವಿಶ್ವಕ್ಕೆ ನೀಡಿದ ಮಹತ್ವದ ಕೊಡುಗೆ ಯೋಗ. ಯೋಗದ ಮೂಲಕ ಒತ್ತಡರಹಿತ ಜೀವನ ನಡೆಸಲು ಸಾಧ್ಯ. ಅತ್ಯಲ್ಪ ಅವಧಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಜಗತ್ತಿನಾದ್ಯಂತ ಪಸರಿಸಿದೆ ಎಂದು ಹೇಳಿದರು.