ಬಿಹಾರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ಮೋದಿಯವರು ಜೆಡಿಯು ಮತ್ತು ಆರ್ಜೆಡಿ ಪಕ್ಷದ ಮೇಲೆ ಪ್ರಖರ ವಾಗ್ದಾಳಿ ನಡೆಸಿದ್ದು, 'ಮಹಾಮೈತ್ರಿಕೂಟದ ಏಕೈಕ ಅಜೆಂಡಾ ತಮ್ಮನ್ನು ಸೋಲಿಸುವುದು', ಎಂದು ಅಣಕವಾಡಿದ್ದಾರೆ.
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿಯವರು, 'ಎಲ್ಲ ಬಿಜೆಪಿ ಅಭ್ಯರ್ಥಿಗಳು ಬಿಹಾರದ ಅಭಿವೃದ್ಧಿಗಾಗಿ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದು ನಮ್ಮ ಏಕೈಕ ಅಜೆಂಡಾ. ಆದರೆ ಮಹಾಮೈತ್ರಿಕೂಟಗಳು 'ಮೋದಿ ವಿನಾಶ'ವೊಂದೇ ನಮ್ಮ ಅಜೆಂಡಾ ಎಂದು ಹೇಳುತ್ತಿದ್ದಾರೆ', ಎಂದು ಟೀಕಿಸಿದ್ದಾರೆ.
“ಮೋದಿಯ ವಿನಾಶ", ಒಂದು ಚುನಾವಣೆಯ ವಿಷಯವಾಗಿದೆ ಎಂಬುದು ವಿಪರ್ಯಾಸ. ಪ್ರತಿದಿನ ಅವರಿದನ್ನು ಹೇಳುತ್ತಲೇ ಇರುತ್ತಾರೆ. ಒಬ್ಬ ನಾಯಕರು ಹೇಳುತ್ತಾರೆ ಬಿಹಾರದಲ್ಲಿ ಸೋತರೆ, ದೆಹಲಿಯಲ್ಲಿ ಮೋದಿ ಕತೆ ಮುಗಿದಂತೆ ಎನ್ನುತ್ತಾರೆ, ಎಂದು ಮೋದಿ ವ್ಯಂಗ್ಯವಾಡಿದ್ದಾರೆ.
'ಪ್ರಜಾಪ್ರಭುತ್ವ ಎನ್ನುವುದು ಯಾರದೋ ವಿನಾಶವನ್ನು ಉದ್ದೇಶವಾಗಿಟ್ಟುಕೊಂಡಿರುವುದಲ್ಲ. ಅದರ ನಿಜವಾದ ಅರ್ಥ ಜನರ ಆಶೋತ್ತರಗಳನ್ನು ಈಡೇರಿಸುವುದು', ಎಂದು ಮೋದಿ ಹೇಳಿದ್ದಾರೆ.