ಭೀಕರ ಬರಗಾಲವನ್ನು ಎದುರಿಸುತ್ತಿರುವ ಮರಾಠವಾಡಾ ಪ್ರದೇಶದ ಪರಿಸ್ಥಿತಿ ದಿನೇ ದಿನೇ ಚಿಂತಾಜನಕವಾಗುತ್ತಿದೆ. ಮಾನ್ಸೂನ್ ಮಳೆಗೆ ಒಂದುವರೆ ತಿಂಗಳು ಬಾಕಿ ಇರುವಾಗಲೇ ಈ ಪ್ರದೇಶದ ಅಣೆಕಟ್ಟುಗಳಲ್ಲಿ ಕೇವಲ 2 ಪ್ರತಿಶತ ನೀರು ಮಾತ್ರ ಉಳಿದುಕೊಂಡಿದೆ.
ಇಲ್ಲಿರುವ 11 ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ನೆಲ ಮಟ್ಟಕ್ಕೆ ಕುಸಿದಿದ್ದು, ನೀರಿನ ಹರಿವು ನಿಂತಿದರಿಂದ ನೀರನ್ನು ಎತ್ತಿ ತೆಗೆಯಬೇಕಾಗಿದೆ. ಮಂಜಾರಾ ಮತ್ತು ಲೋವರ್ ತೆರ್ನಾ ಅಣೆಕಟ್ಟುಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ.
ಸತತ ನಾಲ್ಕು ವರ್ಷಗಳಿಂದ ಮರಾಠವಾಡ ಪ್ರದೇಶ ಬರಗಾಲ ಪರಿಸ್ಥಿತಿ ಎದುರಿಸುತ್ತಿದೆ. ಆದರೆ, ಕಳೆದ ವರ್ಷ ಈ ಅವಧಿಯಲ್ಲಿ ಅಣೆಕಟ್ಟುಗಳ ನೀರಿನ ಮಟ್ಟ 10 ಪ್ರತಿಶತದಷ್ಟಿತ್ತು. ಮಾನ್ಸೂನ್ ಮಳೆಯಾಗುವ ಮುಂಚೆ ಈ ಪ್ರದೇಶದ ಅಣೆಕಟ್ಟುಗಳಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಲಿದೆ ಎಂದು ಮಹಾರಾಷ್ಟ್ರ ರಾಜ್ಯ ಸರಕಾರ ಸೂಚನೆ ನೀಡಿದೆ.
ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಬೇಗ ಸುರಿಯುವ ನಿರೀಕ್ಷೆ ಇದೆ ಎಂದು ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಭರವಸೆಯನ್ನು ವ್ಯಕ್ತ ಪಡಿಸಿದ್ದಾರೆ.