ಹರಿಯಾಣಾದಲ್ಲಿ ಜಾಟ್ ಸಮುದಾಯದ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನೆ ಮುಂದುವರಿಸಿರುವಂತೆಯೇ, ಮೀಸಲಾತಿ ಅರ್ಹತೆ ನಿಗದಿಪಡಿಸಲು ರಾಜಕೀಯೇತರ ಸಮಿತಿ ರಚಿಸಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ನೀಡಿದ್ದಾರೆ.
ಅನೇಕ ಸಮುದಾಯಗಳ ಜನತೆ ಮೀಸಲಾತಿಗಾಗಿ ಒತ್ತಾಯಿಸುತ್ತಿರುವುದರಿಂದ, ಮೀಸಲಾತಿಗೆ ಅರ್ಹರು ಯಾರು ಎನ್ನುವ ಬಗ್ಗೆ ನಿರ್ಧರಿಸಲು ರಾಜಕೀಯೇತರ ಸಮಿತಿ ರಚಿಸುವುದು ಸೂಕ್ತ. ಇಲ್ಲವಾದಲ್ಲಿ ಪಟ್ಟಬದ್ರ ಹಿತಾಸಕ್ತಿಗಳ ಕೈ ಮೇಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೇಲ್ಜಾತಿಯಲ್ಲಿ ಜನಿಸಿದ್ದಾನೆ ಎನ್ನುವ ಕೇವಲ ಒಂದೇ ಒಂದು ಕಾರಣಕ್ಕೆ ಅಂತಹ ವ್ಯಕ್ತಿಗೆ ಮೀಸಲಾತಿ ನಿರಾಕರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾವ ಸಮುದಾಯವನ್ನು ಮುಂದೆ ತರಲು ಮೀಸಲಾತಿ ನೀಡಬೇಕು. ಎಷ್ಟು ವರ್ಷಗಳವರೆಗೆ ಮೀಸಲಾತಿ ನೀಡಬೇಕು ಎನ್ನುವ ನಿರ್ಧಾರದ ಅಧಿಕಾರ ಸಮಿತಿಗೆ ನೀಡಬೇಕು ಎಂದು ಹೇಳಿದ್ದಾರೆ.
ಮೀಸಲಾತಿ ವಿವಾದಕ್ಕೆ ತಮ್ಮ ಪರಿಹಾರವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಮಾನ ಅವಕಾಶ ದೊರೆಯಬೇಕು ಎನ್ನುವುದು ನನ್ನ ನಿಲುವಾಗಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದರು.