ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಮೈತ್ರಿಕೂಟದಲ್ಲಿದ್ದಾಗ ವಜ್ರದಂತಿದ್ದರು. ಇದೀಗ ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ವಜ್ರದ ಹೊಳಪನ್ನು ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಬಿಹಾರ್ ರಾಜ್ಯ ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾಂಗ್ರೆಸ್ ಮತ್ತು ಆರ್ಜೆಡಿ ಪಕ್ಷಗಳು ನೇರ ಕಾರಣವಾಗಿವೆ ಎಂದು ಆರೋಪಿಸಿದರು.
ನಿತೀಶ್ ಕುಮಾರ್ ಬಿಜೆಪಿ ಮೈತ್ರಿಕೂಟದಲ್ಲಿದ್ದಾಗ ವಜ್ರದ ಮೌಲ್ಯವನ್ನು ಹೊಂದಿದ್ದರು. ಬಿಜೆಪಿ ಮೈತ್ರಿಕೂಟವನ್ನು ತೊರೆದು ಲಾಲು ಯಾದವ್ ಅವರೊಂದಿಗೆ ಕೈ ಜೋಡಿಸಿ ಕಲ್ಲಿದ್ದಲು ತರಹ ಆಗಿದ್ದಾರೆ. ನಮ್ಮ ಜೊತೆಗಿದ್ದಾಗ ಯಶಸ್ವಿಯಾಗಿದ್ದರು. ಇದೀಗ ಲಾಲು ಜೊತೆ ಕೈ ಜೋಡಿಸಿದ್ದರಿಂದ ವಿಫಲವಾಗಿದ್ದಾರೆ ಎಂದು ಲೇವಡಿ ಮಾಡಿದರು.
ಬಿಹಾರ್ ಸಿಎಂ ನಿತೀಶ್ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದಾಗ ಅವರು ಉತ್ತಮ ಸಾಧನೆ ಮಾಡಿ ರಾಜ್ಯದಲ್ಲಿದ್ದ ಗೂಂಡಾ ರಾಜ್ ಅಂತ್ಯಗೊಳಿಸಿದ್ದರು. ನಮ್ಮೊಂದಿಗೆ ಮೈತ್ರಿ ಅಂತ್ಯವಾದ ನಂತರ ಮತ್ತೆ ರಾಜ್ಯದಲ್ಲಿ ಜಂಗಲ್ ರಾಜ್ ಆರಂಭವಾಗಿದೆ ಎಂದು ಆರೋಪಿಸಿದರು.
ಬಿಹಾರ್ ವಿಧಾನಸಭೆ ಚುನಾವಣೆ ಐದು ಹಂತಗಳಲ್ಲಿ ನಡೆಯಲಿದ್ದು ಆಕ್ಟೋಬರ್ 12 ರಿಂದ ನವೆಂಬರ್ 5 ರವರೆಗೆ ನಡೆಯಲಿದೆ.