ಭಾರತೀಯ ನೌಕಾಪಡೆಯಲ್ಲಿ ಪತ್ನಿಯರ ವಿನಿಮಯ ಆರೋಪಗಳನ್ನು ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಕೇರಳ ಪೊಲೀಸ್ಗೆ ಆದೇಶ ನೀಡಿದೆ.
ಪತ್ನಿಯರ ಅದಲು ಬದಲು ಪ್ರಕ್ರಿಯೆಯಲ್ಲಿ ಸೇರುವುದಕ್ಕೆ ನಿರಾಕರಿಸಿದ ನೌಕಾಪಡೆಯ ಪರಿತ್ಯಕ್ತ ಪತ್ನಿಯೊಬ್ಬರು ತಮ್ಮ ಪತಿ ಮತ್ತು ಅವರ ಸಹೋದ್ಯೋಗಿಗಳ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶ ಹೊರಬಿದ್ದಿದೆ.
ಮಹಿಳೆ ತನ್ನ ದೂರಿನಲ್ಲಿ ತನ್ನ ಪತಿ, ನಾಲ್ವರು ನೌಕಾಧಿಕಾರಿಗಳು ಮತ್ತು ಅವರ ಪತ್ನಿಯೊಬ್ಬರು ಪತ್ನಿಯರ ಅದಲುಬದಲಿನಲ್ಲಿ ಭಾಗವಹಿಸಿದ್ದರೆಂದು ಮಹಿಳೆ ದೂರು ನೀಡಿದ್ದರು. ಮುಖ್ಯನ್ಯಾಯಮೂರ್ತಿ ಟಿ.ಎಸ್. ಠಾಕುರ್, ನ್ಯಾಯಮೂರ್ತಿಗಳಾದ ಬಾನುಮತಿ ಮತ್ತು ಯು. ಯು. ಲಲಿತ್ ಈ ಕುರಿತು ತನಿಖೆಗೆ ಎಸ್ಐಟಿಯನ್ನು ಸ್ಥಾಪಿಸುವಂತೆ ಕೇರಳ ಡಿಜಿಪಿಗೆ ಆದೇಶ ನೀಡಿದ್ದು ಮೂರು ತಿಂಗಳಲ್ಲಿ ತನಿಖೆ ಮುಗಿಸುವಂತೆ ಸೂಚಿಸಿದೆ.
ಎಫ್ಐಆರ್ ಕುರಿತು ಸಿಬಿಐ ತನಿಖೆ ನಡೆಸುವುದನ್ನು ಕೋರ್ಟ್ ತಳ್ಳಿಹಾಕಿದ್ದು, ರಾಜ್ಯಪೊಲೀಸರಿಗೆ ತನಿಖೆಯನ್ನು ಮುಗಿಸುವಂತೆ ತಿಳಿಸಿದೆ.
ಮಹಿಳೆಯು ನೌಕಾಧಿಕಾರಿಯನ್ನು 2012ರ ಮಾರ್ಚ್ನಲ್ಲಿ ಮದುವೆಯಾಗಿ ಅವರ ಜತೆ ಕೊಚ್ಚಿಗೆ ತೆರಳಿದ್ದರು. ಕೇವಲ ಒಂದು ವರ್ಷದಲ್ಲಿ ಅವರ ನಡುವೆ ವಿರಸ ಉಂಟಾಗಿತ್ತು. ತನ್ನ ಪತಿ ಪತ್ನಿಯರನ್ನು ಬದಲಿಸುವ ಪಾರ್ಟಿಗಳಿಗೆ ಹೋಗುವಂತೆಯೂ, ಬೇರೆ ನೌಕಾಧಿಕಾರಿಯ ಜತೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆಂದು ಮಹಿಳೆ ಆರೋಪಿಸಿದ್ದು, ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಅವರ ಪತಿ ಮನೆಯವರ ಮೇಲೆ ದೂರು ನೀಡಿದ್ದಾರೆ.
ಐವರು ನೌಕಾಧಿಕಾರಿಗಳು ಮತ್ತು ಅವರ ಪೈಕಿ ಒಬ್ಬರ ಪತ್ನಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಪತಿ ಬೇರೊಬ್ಬ ಹಿರಿಯ ಅಧಿಕಾರಿಯ ಪತ್ನಿಯ ತೆಕ್ಕೆಯಲ್ಲಿರುವುದನ್ನು ಕಂಡುಹಿಡಿದಾಗಿನಿಂದ ತನಗೆ ಮಾನಸಿಕ ಅಸ್ವಸ್ಥೆಯೆಂದು ಸಾಬೀತು ಮಾಡಲು ಪತಿ ಯತ್ನಿಸಿದ್ದಾರೆಂದು ಹೇಳಿದರು.