ಮಾಜಿ ಐಪಿಎಲ್ ಆಯುಕ್ತ ಲಲಿತ್ ಮೋದಿ ಪರ ವಾದ ಮುಂದುವರಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಮೋದಿ ಪರ ವಕೀಲ ಮೆಹಮೂದ್ ಆಬ್ದಿಗೆ ಭೂಗತ ದೊರೆ ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕಳಂಕಿತ ಮಾಜಿ ಐಪಿಎಲ್ ಆಯುಕ್ತ ಹಾಗೂ ಆತನ ಬೆಂಬಲಿಗರಿಗೆ ಸಂಕಷ್ಟಗಳ ಸರಣಿ ಅಂತ್ಯವಾಗುವಂತೆ ಕಾಣುತ್ತಿಲ್ಲ. ನ್ಯಾಯಾಲಯದಲ್ಲಿ ಮೋದಿ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಇದೀಗ ಅವರ ವಕೀಲ ಮೆಹಮೂದ್ ಆಬ್ದಿಗೆ ಭೂಗತ ದೊರೆ ಪೂಜಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ ಮೋದಿ ಪರ ವಕೀಲ ಮೆಹಮೂದ್ ಅಬ್ದಿ, ರವಿವಾರದಂದು ರಾತ್ರಿ 2.15ಕ್ಕೆ ಮೊಬೈಲ್ ಫೋನ್ಗೆ ಕರೆ ಬಂದಿದ್ದು ಮೋದಿ ಪರ ವಾದಿಸುವುದನ್ನು ಮುಂದುವರಿಸಿದಲ್ಲಿ ನೀನು ಮತ್ತು ನಿನ್ನ ಕುಟುಂಬ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರಿಂದ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದೇನೆ ಎಂದು ಅಬ್ದಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲೂ ಒಬ್ಬ ವಕೀಲನ ಹತ್ಯೆ ಮಾಡಿದ್ದೇನೆ. ನನ್ನ ಬೆಂಬಲಿಗರು ನಿನ್ನ ವಿಳಾಸ ಮತ್ತು ಕುಟುಂಬದ ಸದಸ್ಯರ ವಿವರಗಳನ್ನು ಕಲೆಹಾಕಿದ್ದಾರೆ. ನನ್ನ ಮೊಬೈಲ್ ನಂಬರ್ ಬೇಕಾದಲ್ಲಿ ಬರೆದುಕೊಳ್ಳಿ ಎಂದು ಪೂಜಾರಿ ಹೇಳಿದ್ದಾಗಿ ಅಬ್ದಿ ಮಾಹಿತಿ ನೀಡಿದ್ದಾರೆ.
ಬೆದರಿಕೆ ಕರೆಯ ಬಗ್ಗೆ ಸುದ್ದಿಗಾರರು ಮೆಹಮೂದ್ ಆಬ್ದಿಯನ್ನು ಭೇಟಿ ಮಾಡಿ ವಿವರಣೆ ಕೇಳಿದಾಗ, ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿರುವುದು ನಿಜ. ಕಾಲ್ ಲೋಕೇಶನ್ ಆಸ್ಟ್ರೇಲಿಯಾದಲ್ಲಿದೆ ಎಂದು ಹೇಳಿದ್ದಾರೆ.