ನವಜಾತ ಶಿಶುವೊಂದು ತನ್ನ ಅಪರಾಧಿ ತಂದೆಯ ಜಾಡು ಹಿಡಿಯಲು ಪೊಲೀಸರಿಗೆ ಪರೋಕ್ಷವಾಗಿ ಸಹಾಯ ಮಾಡಿದ ಕುತೂಹಲಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಘಾಟ್ಕೋಪಾರ್ ನಿವಾಸಿ ಯುವಕನೊಬ್ಬನನ್ನು ಕೆಲವು ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ. ಆತನ ಪೋಷಕರಿಂದ 2 ಕೋಟಿ ರೂಪಾಯಿ ಲಪಟಾಯಿಸಿ ಕಿಡ್ನಾಪರ್ಸ್ ಪರಾರಿಯಾಗಿದ್ದರು. ಆದರೆ ಪೊಲೀಸರು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕುತೂಹಲಕಾರಿಯಾದ ಅಂಶವೇನೆಂದರೆ ಪೊಲೀಸರು ಆರೋಪಿಗಳನ್ನು ತಲುಪಲು ಕಾರಣವಾಗಿದ್ದು ಒಂದು ನವಜಾತ ಶಿಶು.
ತನ್ನನ್ನು ಅಪಹರಿಸಿದವರಲ್ಲಿ ಒಬ್ಬ ತನ್ನ ಪತ್ನಿ ಎಪ್ರಿಲ್ 3 ರಂದು ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ ಎಂದು ಹೇಳಿದ್ದನ್ನು ಕೇಳಿಸಿಕೊಂಡಿದ್ದ ಅಪಹರಣಕ್ಕೊಳಗಾದ ಯುವಕ ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದ. ಸ್ಥಳೀಯ ಆಸ್ಪತ್ರೆಯಲ್ಲಿ ಆ ದಿನದಂದು ಹುಟ್ಟಿದ ಮಕ್ಕಳ ತಂದೆಯ ಬಗ್ಗೆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಇದನ್ನು ಬಳಸಿಕೊಂಡಿದ್ದಾರೆ.
ಈ ಕಿಡ್ನಾಪರ್ಸ್ ಈ ಮೊದಲು ಸಹ ಎರಡು ಅಪಹರಣ ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿಯನ್ನು 40 ವರ್ಷದ ಮೆಕ್ಯಾನಿಕಲ್ ಇಂಜಿನಿಯರ್ ಅಜಿತ್ ಅಪರಾಜ್ ಎಂದು ಗುರುತಿಸಲಾಗಿದೆ.
9 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಯುವಕನ ಬಿಡುಗಡೆಗೆ ಆತನ ಪೋಷಕರು ಆರೋಪಿಗಳಿಗೆ ನೀಡಿದ್ದ 2 ಕೋಟಿ ರೂಪಾಯಿಗಳಲ್ಲಿ 90 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 11 ರಂದು 21 ವರ್ಷದ ಬಿಕಾಂ ವಿದ್ಯಾರ್ಥಿಯನ್ನು ಆತನ ಮನೆಯ ಹೊರಗಡೆಯಿಂದ ಅಪಹರಿಸಿದ್ದ ಆರೋಪಿಗಳು ಎಪ್ರಿಲ್ 12 ರಂದು 2 ಕೋಟಿ ಹಣ ನೀಡಿ ನಿಮ್ಮ ಮಗನನ್ನು ಕರೆದುಕೊಂಡು ಹೋಗಿ ಎಂದು ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಆತನ ತಂದೆಗೆ ಫೋನ್ ಕರೆ ಮಾಡಿ ತಿಳಿಸಿದ್ದರು.