ಹೆತ್ತ ತಾಯಿಯೇ ತನ್ನ ಐದು ವರ್ಷದ ಮಗನನ್ನು ಕೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮೃತಳನ್ನು ದೀಪ್ತಿ ತೇಜಸ್ ಮೋರೆ(32) ಹಾಗೂ ಐದು ವರ್ಷದ ಮಗ ಅರ್ಣವ ಮೊರೆ ಎಂದು ಗುರುತಿಸಲಾಗಿದ್ದು ಸಿಂಹಗಡ ರಸ್ತೆಯ ಮಾಣಿಕಬಾಗ್ ನಿಖಿಲ್ ಗಾರ್ಡನ್ ಸೊಸೈಟಿ ಕಟ್ಟಡದ ಮೂರನೇ ಮಹಡಿಯ ನಿವಾಸಿಗಳಾಗಿದ್ದಾರೆ.
ಪತಿ ತೇಜಸ್ ಮೋರೆ(35) ಮತ್ತು ಪತ್ನಿ ದೀಪ್ತಿ ವೃತ್ತಿಯಲ್ಲಿ ಇಂಜಿನಿಯರ್ಗಳಾಗಿದ್ದು, ರವಿವಾರದಂದು ದೀಪ್ತಿಯ ಜನ್ಮದಿನವಿತ್ತು. ಅದರ ಆಚರಣೆಗೆ ಸಂಬಂಧಿಸಿದಂತೆ ಪತಿ-ಪತ್ನಿಯರ ನಡುವೆ ಶನಿವಾರ ರಾತ್ರಿ ಜಗಳವಾಗಿದೆ. ಕೋಪದ ಭರದಲ್ಲಿ ಮಗನೊಂದಿಗೆ ರೂಮ್ ಸೇರಿ ಬಾಗಿಲು ಹಾಕಿಕೊಂಡ ಮಡದಿ ಮಗನ ಮಣಿಕಟ್ಟಿನ ನರ ಕತ್ತರಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ.
ರವಿವಾರ ಬೆಳಗಾಗುತ್ತಿದ್ದಂತೆ ಅಳುತ್ತ ಪತಿಯ ಬಳಿ ಬಂದ ದೀಪ್ತಿ ತಾನು ಮಗನನ್ನು ಕೊಂದಿರುವುದಾಗಿ ಹೇಳಿದ್ದಾಳೆ. ಆಘಾತಗೊಂಡ ಪತಿ ಒಳಗೆ ಧಾವಿಸುತ್ತಿದ್ದಂತೆ ಹೊರಗಿನಿಂದ ಬಾಗಿಲು ಹಾಕಿ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತೇಜಸ್ ಕೂಗಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ನೆರೆಹೊರೆಯವರು ಬಂದು ಬಾಗಿಲನ್ನು ತೆರೆದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ದೀಪ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಆಕೆ ಖಿನ್ನತೆಯ ಕಾರಣದಿಂದ ಈ ಕೃತ್ಯವನ್ನೆಸಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಆಕೆ ಡೆತ್ ನೋಟ್ ಬರೆದಿಟ್ಟಿದ್ದು, ಮರಾಠಿ ಭಾಷೆಯಲ್ಲಿರುವ ಡೆತ್ ನೋಟ್ನಲ್ಲಿ , 'ನಾನು ಬದುಕಿನ ಬಗ್ಗೆ ಅತಿ ಹೆಚ್ಚು ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆ, ಆದರೆ ಅದ್ಯಾವುದು ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮಗನೊಂದಿಗೆ ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ', ಎಂದು ಬರೆದಿದೆ.
ಪ್ರಕರಣದ ತನಿಖೆ ನಡೆಯುತ್ತಿದ್ದು ದೀಪ್ತಿ ಪತಿಯನ್ನು ನಾಳೆ ವಿಚಾರಣೆಗೊಳಪಡಿಸಲಿದ್ದೇವೆ. ಮೃತಳು ಅಂತರ್ಮುಖಿಯಾಗಿದ್ದು ಯಾರೊಡನೆಯೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ ಎಂದು ಆಕೆಯ ನೆರೆಹೊರೆಯವರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.