ತಾಯಿಯೊಬ್ಬಳು ಮೂವರು ಮಕ್ಕಳನ್ನು ಕೆರೆಗೆ ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಮೂಡನಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ತಾಯಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಹೆಣ್ಣು ಮಕ್ಕಳು ಮಾತ್ರ ಈಜಿ ದಡ ಸೇರಲು ಸಫಲರಾಗಿದ್ದಾರೆ.
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ತಾಯಿ ಇಂದ್ರಮ್ಮ(35) ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ಶಂಕಿಸಲಾಗಿದೆ.
ಪತಿ ಪುಟ್ಟಬೋವಿ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇಂದ್ರಮ್ಮ ಈ ದುಷ್ಕೃತ್ಯಕ್ಕೆ ಕೈ ಹಾಕಿದ್ದಾಳೆ . ಕುಟುಂಬದ ಭಾರ ಹೊರಬೇಕಾದ ಪತಿಯೇ ಭೀಕರ ಕಾಯಿಲೆಗೆ ಸಿಲುಕಿದ್ದು ಆಕೆಯನ್ನು ಹತಾಶಳನ್ನಾಗಿಸಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಬೈರಮುಡಿ ಕೆರೆಯಲ್ಲಿ ನಾಲ್ವರ ಶವ ಪತ್ತೆಯಾಗಿದ್ದು ಸಂಬಂಧಿಕರ ಶೋಕ ಮುಗಿಲು ಮುಟ್ಟಿದೆ.
ಮೃತ ಮಕ್ಕಳನ್ನು ರಕ್ಷಿತ್ (4), ಕೇಶವ (2) ಮತ್ತು ಬೇಬಿ(1) ಎಂದು ಗುರುತಿಸಲಾಗಿದೆ. 15 ಮತ್ತು 13 ವರ್ಷದ ಬಾಲಕಿಯರಿಬ್ಬರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಯಶ ಕಂಡಿದ್ದಾರೆ. ಆದರೆ ಪುಟ್ಟ ಮಕ್ಕಳೆಲ್ಲರೂ ತಾಯಿಯ ಜತೆ ಕೊನೆಯುಸಿರೆಳೆದಿದ್ದಾರೆ.