ನಿಗದಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಗೊಳಿಸಿರುವ ತನ್ನ ಕ್ರಮದ ಬಗ್ಗೆ ಮೋದಿ ಸರಕಾರ ಪಾಕಿಸ್ತಾನಕ್ಕೆ ಸಂದೇಶ ಕಳುಹಿಸಿದ್ದು, ಕಾಶ್ಮೀರದ ಪ್ರತ್ಯೇಕತಾವಾದಿಗಳ ಜತೆಗಿನ ಚರ್ಚೆಯನ್ನು ನಿಲ್ಲಿಸದ ಹೊರತು ದ್ವಿಪಕ್ಷೀಯ ಮಾತುಕತೆಗೆ ಭಾರತ ಮುಂದಾಗುವುದಿಲ್ಲ ಎಂದು ಪಾಕ್ಗೆ ಹೇಳಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಿಗದಿಯಾಗಿದ್ದರೂ, ಎಂದಿನಂತೆ ಪಾಕ್ ಪ್ರತ್ಯೇಕತಾವಾದಿಗಳಿಗೆ ಮಾತುಕತೆಗಾಗಿ ಆಹ್ವಾನ ನೀಡಿತು. ಯಾವ ಸರಕಾರಕ್ಕೂ ಇದನ್ನು ತಡೆಯುವ ಧೈರ್ಯ ಬರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಮೋದಿ ಸರಕಾರ ಪ್ರತ್ಯೇಕತಾವಾದಿಗಳ ಜತೆಗಿನ ಚರ್ಚೆಯನ್ನು ನಿಲ್ಲಿಸದ ಹೊರತು ದ್ವಿಪಕ್ಷೀಯ ಮಾತುಕತೆಗೆ ಭಾರತ ಮುಂದಾಗುವುದಿಲ್ಲ ಎಂದು ಪಾಕ್ಗೆ ಸ್ಪಷ್ಟಪಡಿಸಿದೆ. ಕೇವಲ ಬಿಜೆಪಿಯ ಪ್ರಧಾನಿ ಈ ದೃಢ ನಿರ್ಧಾರದ ಮಾತುಗಳನ್ನಾಡಬಲ್ಲ ಎಂದು ನಾನು ಅಭಿಮಾನದಿಂದ ಹೇಳುತ್ತೇನೆ ಎಂದು ಶಾ ತಿಳಿಸಿದ್ದಾರೆ.
ಹಾಗೆಯೇ, ಸರ್ಕಾರ ದೇಶದ ರೈತರ ಹಿತಾಸಕ್ತಿಗೆ ವಿರುದ್ಧವಾಗಿರುವ ಡಬ್ಲ್ಯೂಟಿಒ ( WTO) ಪ್ರಸ್ತಾಪದ ಒಪ್ಪಂದವನ್ನು ಸ್ವೀಕರಿಸದಿರಲು ಸರಕಾರ ನಿರ್ಧರಿಸಿದೆ ಎಂದು ಶಾ ಹೇಳಿದ್ದಾರೆ.
ಮೋದಿ ಸರಕಾರ ಶುಚಿತ್ವ ಅಭಿಯಾನ, ಶೌಚಾಲಯಗಳ ನಿರ್ಮಾಣ ಮತ್ತು ದೇಶದಲ್ಲಿನ ಉತ್ಪಾದನೆಗೆ ಉತ್ತೇಜನ ನೀಡುವ ಮೂಲಕ ಹೊಸ ಆರಂಭಕ್ಕೆ ಮುನ್ನುಡಿ ಹಾಡಿದೆ ಎಂದು ಶಾ ತಮ್ಮ ಪಕ್ಷದ ಸರಕಾರವನ್ನು ಕೊಂಡಾಡಿದರು.