ತಮ್ಮ ಸರಕಾರದ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ನೀತಿಯನ್ನು ಒತ್ತಿ ಹೇಳಿರುವ ಪ್ರಧಾನಿ ಮೋದಿ ಸಂಪೂರ್ಣ ಸಾರ್ಕ್ ಪ್ರಾಂತ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಸಿಗಲೆಂದು ನೆರೆಹೊರೆಯ ರಾಷ್ಟ್ರಗಳನ್ನು ತಲುಪುವ ಪ್ರಯತ್ನದಲ್ಲಿದ್ದಾಗಿ ಹೇಳಿದ್ದಾರೆ.
ಗೌವಾಹಟಿಯಲ್ಲಿ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾಧ್ಯಮ ಮತ್ತು 8 ಸಾರ್ಕ್ ದೇಶಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿಯವರು ತಾವು ಪ್ರಾದೇಶಿಕ ಶಾಂತಿ ಮತ್ತು ಸಮೃದ್ಧಿಯ ಆಕಾಂಕ್ಷಿ ಎಂದಿದ್ದಾರೆ.
ಸಾರ್ಕ್ ಪ್ರಾಂತ್ಯ ವಿಶ್ವದ 21 ಪ್ರತಿಶತ ಜನಸಂಖ್ಯೆಯನ್ನು ಹೊಂದಿದೆ. ವಿಶ್ವದ ಆರ್ಥಿಕತೆಯಲ್ಲಿ ನಮ್ಮ ಪಾಲು 9%. ಕ್ರೀಡೆ ಸೇರಿದಂತೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾದ ಸಮಯವಿದು ಎಂದು ಪ್ರಧಾನಿ ಹೇಳಿದ್ದಾರೆ.
ಸಾಕಷ್ಟು ಕಾರಣಗಳಿಗಾಗಿ ಹಲವು ಬಾರಿಯ ಮುಂದೂಡಿಕೆಯಾಗಿದ್ದ 12ನೇ ಆವೃತ್ತಿಯ ದಕ್ಷಿಣ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಶುಕ್ರವಾರ, ದೇಶದ ಈಶಾನ್ಯ ರಾಜ್ಯದ ರಾಜಧಾನಿಗಳಾದ ಅಸ್ಸಾಂನ ಗುವಾಹಟಿ ಹಾಗೂ ಮೇಘಾಲಯದ ಶಿಲ್ಲಾಂಗ್ನಲ್ಲಿ ಆರಂಭವಾಗಿವೆ.
12 ದಿನಗಳ ಕಾಲ ನಡೆಯಲಿರುವ ಗೇಮ್ಸ್ನಲ್ಲಿ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ದೇಶಗಳು ಭಾಗವಹಿಸುತ್ತಿವೆ.