ವಿವಾದಾತ್ಮಕ ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದಲ್ಲಿ ಅನಗತ್ಯವಾಗಿ ನೆಹರು-ಗಾಂಧಿ ಕುಟುಂಬದ ಹೆಸರನ್ನು ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ನೆಹರು-ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ಹೆಸರನ್ನು ಹಗರಣದಲ್ಲಿ ತಂದು ಅಪಮಾನ ಮಾಡುವ ಉದ್ದೇಶ ಮೋದಿ ಹೊಂದಿದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರವಿದ್ದರೂ ಎರಡು ವರ್ಷಗಳಿಂದ ಹಗರಣದ ಬಗ್ಗೆ ಯಾಕೆ ತನಿಖೆ ನಡೆಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಿವಿಐಪಿ ಹಗರಣದಲ್ಲಿ ಹಗರಣ ನಡೆಯುತ್ತಿದೆ ಎನ್ನುವ ಸಂದೇಹ ವ್ಯಕ್ತವಾದ ಕೂಡಲೇ ಯುಪಿಎ ಸರಕಾರ, ಇಟಲಿ ಮೂಲದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಒಪ್ಪಂದವನ್ನೇ ರದ್ದುಗೊಳಿಸಲಾಗಿತ್ತು. ಪ್ರಕರಣದ ಬಗ್ಗೆ ಸಿಬಿಐ ತನಿಖೆಗೂ ಆದೇಶಿಸಲಾಗಿತ್ತು ಎಂದರು.
ಇಟಲಿ ಕೋರ್ಟ್ನಲ್ಲಿ ನೆಹರು-ಗಾಂಧಿ ಕುಟುಂಬದ ಸದಸ್ಯರ ಹೆಸರುಗಳಿಲ್ಲ. ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಕೂಡಾ ಹಗರಣದಲ್ಲಿ ಕಾಂಗ್ರೆಸ್ ಪಕ್ಷದವರ ಹೆಸರಿಲ್ಲವೆಂದು ಘೋಷಿಸಿದ್ದಾರೆ. ಆದಾಗ್ಯೂ ಪ್ರಧಾನಿ ಮೋದಿ, ನೆಹರು-ಗಾಂಧಿ ಕುಟುಂಬದ ಸದಸ್ಯರ ಹೆಸರುಗಳನ್ನು ಎಳೆದುತರಲು ಸಂಚು ರೂಪಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದಾರೆ.
ವೆಬ್ದುನಿಯಾ
ಮೊಬೈಲ್ ಆಪ್ (ಡೌನ್ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.