ತೆಲಂಗಾಣದ ರಸ್ತೆಗಳು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಪುನಃ ಸಾಬೀತಾಗಿದೆ. 15 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿದ ಐವರು ಯುವಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ರಂಗಾರೆಡ್ಡಿ ಜಿಲ್ಲೆಯಲ್ಲಿ ಗುರುವಾರ ಇಳಿ ಹೊತ್ತಿನಲ್ಲಿ ಈ ಘಟನೆ ನಡೆದಿದೆ.
ಬೇಸಿಗೆ ರಜೆ ಇದ್ದ ಕಾರಣ ಕಳೆದ ಒಂದುವರೆ ತಿಂಗಳು ಹೈದರಾಬಾದ್ನಲ್ಲಿರುವ ಚಿಕ್ಕಪ್ಪನ ಮನೆಯಲ್ಲಿ ಕಳೆದಿದ್ದ ಬಾಲಕಿ ಗುರುವಾರ ತನ್ನ ತಂದೆಯ ಜತೆ ಊರಿಗೆ ಮರಳುತ್ತಿದ್ದಳು. ವಿಕಾರಾಬಾದ್ ರೈಲು ನಿಲ್ದಾಣದಲ್ಲಿಳಿದು ಅಲ್ಲಿ ಪಾರ್ಕ್ ಮಾಡಿದ್ದ ಬೈಕಿನಲ್ಲಿ ಮಗಳನ್ನು ಕುರಿಸಿಕೊಂಡು ಅಪ್ಪ ಗ್ರಾಮದ ಕಡೆ ಹೊರಟಿದ್ದಾನೆ.
ಸುಮಾರು ಸಾಯಂಕಾಲ 7.30 ರ ಸುಮಾರಿಗೆ ಅವರಿಬ್ಬರು ಮುಥ್ಕುಪಲ್ಲಿ ಗ್ರಾಮದ ಜಂಕ್ಸನ್ ಬಳಿ ತಲುಪಿದಾಗ ಮಗಳು ನೀರು ಕುಡಿಯಲು ಬೈಕ್ ನಿಲ್ಲಿಸೆಂದು ತಂದೆಯ ಬಳಿ ಹೇಳಿದ್ದಾಳೆ. ಆ ಸಂದರ್ಭದಲ್ಲಿ ಸುತ್ತಲೂ ಕತ್ತಲು ಆವರಿಸಿತ್ತು ಮತ್ತು ಅದು ಕಾಡಿನಿಂದ ಸುತ್ತುವರೆದ ಪ್ರದೇಶವಾಗಿತ್ತು. ಅಲ್ಲೇ ಇದ್ದ ಬೋರ್ವೆಲ್ನಲ್ಲಿ ಮಗಳು ನೀರು ಕುಡಿದ ಮೇಲೆ ತಂದೆ ಕುಡಿಯಲು ಹೋದಾಗ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ಆತನ ತಲೆಗೆ ಕಲ್ಲಿನಿಂದ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿ, ಮತ್ತೆ ಮೂವರ ಜತೆ ಸೇರಿ ಆಟೋದಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.
ಪ್ರಜ್ಞೆ ಮರಳಿದ ಕೂಡಲೇ ಮಗಳು ಕಾಣದಿದ್ದರಿಂದ ಆಘಾತಗೊಂಡ ತಂದೆ ಹತ್ತಿರದಲ್ಲಿದ್ದ ಬಂಟ್ವಾರಮ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ.
ಬಾಲಕಿಯ ಪತ್ತೆಗೆ ಬಲೆ ಬೀಸಿದ ಪೊಲೀಸರಿಗೆ ಅಪಹರಣವಾದ ಸ್ಥಳದಿಂದ 400 ಮೀಟರ್ ದೂರದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿದೆ.