ಪ್ರೇಮಿಗಳ ದಿನದ ಮುನ್ನಾದಿನ ತನ್ನ ಗೆಳತಿಯನ್ನು ಭೇಟಿ ಮಾಡಲು ಬಂದಿದ್ದ ವಿವಾಹಿತನೊಬ್ಬ ಆಕೆಯ ಭಾವನಿಂದಲೇ ಕೊಲೆಯಾದ ಘಟನೆ ಭಾನುವಾರ ಗುರ್ಗಾಂವ್ನಲ್ಲಿ ನಡೆದಿದೆ.
ತನ್ನ ನಾದಿನಿ ಜತೆಗಿದ್ದ ಆಕೆಯ ಪ್ರೇಮಿಯನ್ನು ನೋಡಿ ಕೆಂಡಾಮಂಡಲವಾದ ಭಾವ ಆತನನ್ನು ಥಳಿಸಿ ನಾಲ್ಕು ಮಹಡಿ ಕಟ್ಟಡದಿಂದ ಕೆಳಕ್ಕೆ ದೂಡಿದ್ದಾನೆ. ತೀವ್ರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ಈಶ್ವರ್ ಎಂದು ಗುರುತಿಸಲಾಗಿದ್ದು, ಆತ ವಾಯುವ್ಯ ದೆಹಲಿಯ ಜಹಾಂಗೀರ್ಪುರಿ ನಿವಾಸಿಯಾಗಿದ್ದ. ವಿವಾಹಿತನಾಗಿದ್ದ ಆತ ಕಳೆದ 8 ತಿಂಗಳ ಹಿಂದೆ ಗುರ್ಗಾಂವ್ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ರಾಜಸ್ಥಾನ್ ಮೂಲದ 18 ವರ್ಷದ ಯುವತಿಯ ಜತೆ ಫೇಸ್ಬುಕ್ನಲ್ಲಿ ಸ್ನೇಹ ಸಂಪಾದಿಸಿದ್ದ. ಅವರಿಬ್ಬರು ಫೆಬ್ರವರಿ 13 ರಂದು ಭೇಟಿಯಾಗಲು ನಿರ್ಧರಿಸಿದರು. ಮೊದಲೇ ನಿಗದಿ ಪಡಿಸಿದಂತೆ ಈಶ್ವರ್ ಶನಿವಾರ ಸಂಜೆ ಹುಡಾ ಮೆಟ್ರೋ ರೈಲು ನಿಲ್ದಾಣವನ್ನು ತಲುಪಿದ. ಬಳಿಕ ಇಬ್ಬರು ಆಕೆ ಉಳಿದುಕೊಂಡಿದ್ದ ಫ್ಲಾಟ್ ತಲುಪಿದ್ದಾರೆ. ಸುಮಾರು 8.30 ರ ಸುಮಾರಿಗೆ ತನ್ನ ಗೆಳೆಯ ಅನಿಲ್(25) ಜತೆ ನಾದಿನಿ ಮನೆಗೆ ಬಂದ ಆಕೆಯ ಭಾವ ರಮೇಶ್ ಅವರಿಬ್ಬರು ಜತೆಗಿರುವುದನ್ನು ನೋಡಿದ್ದಾರೆ. ಕೋಪದ ಭರದಲ್ಲಿ ರಮೇಶ್(30) ಈಶ್ವರನನ್ನು ಥಳಿಸಿ ಬಾಲ್ಕನಿಯಿಂದ ಕೆಳಕ್ಕೆ ದೂಡಿದ್ದಾನೆ. ಆತ ಕೆಳಕ್ಕೆ ಬಿದ್ದ ತಕ್ಷಣ ಇಬ್ಬರು ಸ್ನೇಹಿತರಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅವನಿಗೆ ರಸ್ತೆ ಅಪಘಾತವಾಗಿದೆ ಎಂದು ಸ್ನೇಹಿತರು ವೈದ್ಯರ ಬಳಿ ಸುಳ್ಳು ಹೇಳಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಾಗ ವೈದ್ಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಯುವತಿ ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಮೃತ ತನ್ನ ಮೂರನೇ ವೈವಾಹಿಕ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಒಂದು ದಿನ ಮೊದಲು ಈ ಘಟನೆ ನಡೆದಿದೆ. ಆತ ವಿವಾಹಿತನಾಗಿದ್ದ ಎಂಬುದು ಪ್ರಿಯತಮೆಗೆ ಗೊತ್ತಿತ್ತೋ, ಇಲ್ಲವೋ ಎಂಬುದು ಪೊಲೀಸರಿಗೆ ಇನ್ನು ಸಹ ಖಚಿತವಾಗಿಲ್ಲ.
ಈಶ್ವರ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಆತನ ತಂದೆಯ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.