ತನ್ನ ಮುಖದ ಮೇಲೆ ಧೂಮಪಾನದ ಹೊಗೆ ಬಿಟ್ಟ ಕಾರಣಕ್ಕೆ 30 ವರ್ಷದ ವ್ಯಕ್ತಿಯೊಬ್ಬನನ್ನು ಅಪರಿಚಿತ ವ್ಯಕ್ತಿಯೊಬ್ಬ 6 ಬಾರಿ ಚಾಕುವಿನಿಂದ ಇರಿದು ಸಾಯಿಸಿದ ಘಟನೆ ಪಶ್ಚಿಮ ದೆಹಲಿಯ ನಂಗಲೋಯಿ ಮೆಟ್ರೋ ನಿಲ್ದಾಣದ ಹೊರಗೆ ನಡೆದಿದೆ.
ಕಳೆದ ಸೋಮವಾರ ರಾತ್ರಿ ಯಾರೋ ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕೇಳಿ ಧಾವಿಸಿದ ಗಸ್ತು ಪೋಲಿಸರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬ ಕಂಡ. ಆತ ತನ್ನ ಕೈ ಬೆರಳಿನಿಂದ ದಿಕ್ಕು ತೋರಿಸುತ್ತಾ ಅಲ್ಲಿ ಓಡುತ್ತಿದ್ದ ವ್ಯಕ್ತಿ ತನ್ನ ಮೇಲೆ ದಾಳಿ ಮಾಡಿದ ಎಂದು ತಿಳಿಸಿದ್ದಾನೆ. ತಕ್ಷಣ ಆತನನ್ನು ಬೆನ್ನಟ್ಟಿದ ಪೋಲಿಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೀಡಿತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಮೆಟ್ರೋ ನಿಲ್ದಾಣದಿಂದ ಹೊರ ಬಂದ ವ್ಯಕ್ತಿ ಅಲ್ಲೇ ಇದ್ದ ಅಂಗಡಿಯೊಂದರಿಂದ ಸಿಗರೇಟ್ ಖರೀದಿಸಿದ್ದಾನೆ. ಸಿಗರೇಟ್ ಸೇದಲು ಆರಂಭಿಸಿದ ಆತ ಅಲ್ಲೇ ನಿಂತಿದ್ದ ಜಿಹಾದ್( 26) ಎಂಬಾತನ ಮುಖದ ಕಡೆ ಹೊಗೆ ಬಿಟ್ಟಿದ್ದಾನೆ. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಜಿಹಾದ್ ತನಗೆ ಸಿಗರೇಟ್ ಹೊಗೆ ಸಹಿಸಲಾಗುವುದಿಲ್ಲ. ನನ್ನ ಕಡೆ ಹೊಗೆ ಬಿಡಬೇಡ ಎಂದಿದ್ದಾನೆ. ಆಗ ಅವರಿಬ್ಬರ ನಡುವೆ ವಿವಾದ ಪ್ರಾರಂಭವಾಗಿದೆ.
ವಾಗ್ವಾದ ಮಾರಾಮಾರಿಗೆ ಪರಿವರ್ತನೆಯಾಗಿ ಕೋಪದ ಭರದಲ್ಲಿ ಜಿಹಾದ್ ಧೂಮ್ರಪಾನಿಗೆ ಚಾಕುವಿನಿಂದ 6 ಬಾರಿ ಇರಿದಿದ್ದಾನೆ ಮತ್ತು ದೂರದಲ್ಲಿ ಪೋಲಿಸರು ಬರುತ್ತಿರುವುದನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.