ಚಹಾ ತಂದು ಕೊಡಲು ತಡ ಮಾಡಿದಳೆಂದು ಸಿಟ್ಟಿಗೆದ್ದ 56 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆಗೈದ ಘಟನೆ ಒಡಿಸ್ಸಾದ ಧೇನ್ಕನಾಲ್ ಜಿಲ್ಲೆಯಲ್ಲಿ ವರದಿಯಾಗಿದೆ.
ರಾಜ್ಯ ರಾಜಧಾನಿ ಭುವನೇಶ್ವರದಿಂದ 110 ಕೀಲೋಮೀಟರ್ ದೂರದಲ್ಲಿರುವ ಗುಹಾಲಿಪಲ್ ಎಂಬ ಹಳ್ಳಿಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಘಟನೆ ನಡೆದ ಒಂದು ದಿನದ ನಂತರ ಆರೋಪಿಯನ್ನು ಪೋಲಿಸರು ಬಂಧಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಸೋಮವಾರ ಬೆಳಿಗ್ಗೆ ವಯಸ್ಸಿನಲ್ಲಿ ತನಗಿಂತ ಒಂದು ವರ್ಷ ಕಿರಿಯಳಾಗಿರುವ ಪತ್ನಿ ಝಾನಾ ಬಳಿ ಪತಿ ಮಹಾಲಿಯಾ ನಾಯಕ್ ಚಹಾವನ್ನು ಕೇಳಿದಾಗ ಸಮಸ್ಯೆ ಪ್ರಾರಂಭವಾಯಿತು. ಅವಳು ಟೀ ತರಲು ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಆತ ಪತ್ನಿಯ ಜತೆ ಜಗಳಕ್ಕಿಳಿದ.
ಇದರಿಂದ ಅಸಮಾಧಾನಗೊಂಡ ಆಕೆ ಆತನಿಗೆ ಅಡುಗೆ ಮಾಡಿ ಬಡಿಸಲು ಸಹ ನಿರಾಕರಿಸಿದಳು. ಆಗ ಜಗಳ ತೀವೃ ಗಂಭೀರತೆಯನ್ನು ಪಡೆದುಕೊಂಡಿತು.
ಈ ಪ್ರಕರಣವನ್ನು ಬುಧವಾರ ರಾತ್ರಿ ಮತ್ತೆ ಕೆದಕಿದ ನಾಯಕ್ ಕೋಪದ ಆವೇಶದಲ್ಲಿ ಹರಿತವಾದ ಆಯುಧದಿಂದ ಆಕೆಯನ್ನು ಕೊಂದು ಬಿಟ್ಟ ಎಂದು ತನಿಖಾಧಿಕಾರಿ ದಶರಥಿ ನಾಥ್ ತಿಳಿಸಿದ್ದಾರೆ.
ತನ್ನ ಅಪರಾಧ ಒಪ್ಪಿಕೊಂಡ ನಂತರ ಪೊಲೀಸರು ನಾಯಕ್ನನ್ನು ಬಂಧಿಸಿದ್ದಾರೆ ಎಂದು ನಾಥ್ ಮಾಹಿತಿ ನೀಡಿದ್ದಾರೆ.