ನ್ಯಾಯಾಲಯದಲ್ಲಿ ಹೆಂಡತಿ ತನ್ನ ವಿರುದ್ಧ ನೀಡಿದ ಹೇಳಿಕೆಯಿಂದ ಕೋಪಗೊಂಡ ವ್ಯಕ್ತಿಯೊಬ್ಬ ಕ್ಷೌರದ ಬ್ಲೇಡಿನಿಂದ ಪತ್ನಿಯ ಮೂಗು ಮತ್ತು ಆಕೆಯ ತಾಯಿಯ ಕಿವಿ ಕತ್ತರಿಸಿ, ಆ ಕಿವಿ, ಮೂಗುಗಳನ್ನು ತಾನೇ ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಗುಣಾ ಜಿಲ್ಲೆಯ ಕಾಲಾ ಪತಾ ಎಂಬಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕೆಲ ವರುಷಗಳ ಹಿಂದೆ ವಿವಾಹವಾಗಿದ್ದ ರಾಣಿ ಮತ್ತು ಉಮೇಶ್ ರಘುವಂಶಿ ನಡುವೆ ಸೌಹಾರ್ದ ಸಂಬಂಧವಿರಲಿಲ್ಲ. ಆತನ ಜತೆ ಬಾಳಲು ಸಾಧ್ಯವಿಲ್ಲವೆಂದು ನಿಶ್ಚಯಿಸಿದ ರಾಣಿ ಉಮೇಶ್ನಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಳು.
ಬುಧವಾರ ನ್ಯಾಯಾಲಯದಲ್ಲಿ ರಾಣಿ ನೀಡಿದ್ದ ಹೇಳಿಕೆಯಿಂದ ಕೆರಳಿದ ಉಮೇಶ್ ತನ್ನ ಸ್ನೇಹಿತರಾದ ಭಾನು ಮತ್ತು ರಾಮಕೃಷ್ಣ ಎಂಬುವವರ ಜತೆ ಆಕೆಯ ಮನೆಗೆ ಬಂದು, ಕ್ಷೌರದ ಬ್ಲೇಡ್ನಿಂದ ರಾಣಿಯ ಮೂಗನ್ನು ಕತ್ತರಿಸಿದ್ದಾನೆ. ಆತನ ಕೃತ್ಯವನ್ನು ಅತ್ತೆ ನರ್ಮದಾ ಬಾಯಿ ವಿರೋಧಿಸಿದಾಗ ಆಕೆಯ ಕಿವಿಗಳೆರಡನ್ನು ಸಹ ಕತ್ತರಿಸಿದ ಆತ , ಹೆಂಡತಿಯ ಮೂಗು ಮತ್ತು ಅತ್ತೆಯ ಕಿವಿಗಳೆರಡನ್ನು ತನ್ನ ಜತೆ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರಾಣಿ, ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯದಲ್ಲಿ ಉಮೇಶ ವಿರುದ್ಧ ಹೇಳಿಕೆ ನೀಡಿ ಆಗ ತಾನೇ ನಾನು ಮನೆಗೆ ಮರಳಿದ್ದೆ. ಆತನ ವಿರುದ್ಧ ನಾನು ನ್ಯಾಯಾಲಯದಲ್ಲಿ ಮಾತನಾಡಿದ್ದುದನ್ನು ಸಹಿಸದಾದ ಉಮೇಶ್, ತನ್ನ ಇಬ್ಬರು ಗೆಳೆಯರ ಜತೆ ನನ್ನ ಮನೆಗೆ ಬಂದ. ನನಗೆ ಹೊಡೆಯಲು ಪ್ರಾರಂಭಿಸಿದ ಆತ ನನ್ನ ಮೂಗನ್ನು ಕತ್ತರಿಸಿದ ಎಂದು ಹೇಳಿದ್ದಾಳೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದು, ಪರಾರಿಯಾಗಿರುವ ಮೂವರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.