ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರವಧಿಯಲ್ಲಿ ಕೇವಲ ಬಾಂಬ್ ಫ್ಯಾಕ್ಟರಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನನ್ನ ರಾಜ್ಯಕ್ಕೆ ಅಪಮಾನ ಮಾಡಿದವರಿಗೆ ನನಗಿಂತ ದೊಡ್ಡ ಶತ್ರು ಯಾರಿಲ್ಲ ಎಂದು ಶಾ ವಿರುದ್ಧ ಗುಡುಗಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯಕ್ಕೆ ಯಾರಾದರೂ ಅಪಮಾನ ಮಾಡಿದರೆ ನಾನು ಸಹಿಸುವುದಿಲ್ಲ. ಅವರಿಗೆ ನನಗಿಂತ ದೊಡ್ಡ ಶತ್ರು ಯಾರಿಲ್ಲ ಎಂದು ವಾಗ್ದಾಳಿ ನಡೆಸಿದ ಮಮತಾ, ಇಂದು ನೀವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದೀರಿ, ಆದರೆ ನಾಳೆ ಸೋಲುತ್ತೀರಿ ಎನ್ನುವುದು ನೆನಪಿರಲಿ. ರವೀಂದ್ರನಾಥ್ ಟ್ಯಾಗೋರ್ ಬಗ್ಗೆ ಏನೋ ಹೇಳಿದ್ದೀರಿ ಮುಂದೆ ಕಾದಿದೆ ನಿಮಗೆ ಮಾರಿಹಬ್ಬ ಎಂದು ಕಿಡಿಕಾರಿದ್ದಾರೆ.
ದೇಶ ಕಂಡ ಖ್ಯಾತ ಕವಿಗಳಾದ ರವೀಂದ್ರ ನಾಥ್ ಟ್ಯಾಗೋರ್ ಮತ್ತು ನಜ್ರುಲ್ ಇಸ್ಲಾಮ್ರಂತಹ ವ್ಯಕ್ತಿಗಳನ್ನು ಅಪಮಾನ ಮಾಡುವುದನ್ನು ಪಶ್ಚಿಮ ಬಂಗಾಳ ಜನತೆ ಸಹಿಸುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಕಳೆದ 2011ರಲ್ಲಿ ಸಿಪಿಐ-ಎಂ ನಾಯಕರು ಕೂಡಾ ಟ್ಯಾಗೋರ್ ಅವರಿಗೆ ಅಪಮಾನ ಮಾಡಿದ್ದರಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.