ರಾಯಗಡ್ ಜಿಲ್ಲೆಯ ಸಾವಿತ್ರಿ ನದಿಗೆ ಅಡ್ಡವಾಗಿ ಕಟ್ಟಲಾಗಿದ್ದ ಬ್ರಿಟಿಷ್ ಕಾಲದ ಬ್ರಿಡ್ಜ್ ಕುಸಿತ ಘಟನೆಗೆ ಸಂಬಂಧಿಸಿದಂತೆ ಮುಳುಗಿ ಹೋಗಿದ್ದ ಇನ್ನೊಂದು ಕಾರ್ ಪತ್ತೆಯಾಗಿದೆ. ಘಟನೆ ನಡೆದ 11 ದಿನದ ಬಳಿಕ ಕಾರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ನದಿಯಲ್ಲಿ ತವೆರಾ ಸುವಿ ಕಾರಿನ ಅವಶೇಷ ಪತ್ತೆಯಾಗಿದ್ದು, ಅದರಲ್ಲಿ ಹಲವು ಮೃತ ದೇಹಗಳು ಸಿಲುಕಿರುವ ಸಾಧ್ಯತೆಗಳಿವೆ. ಕಾರ್ನ್ನು ಹೊರಗೆಳೆದು ತೆಗೆದ ಮೇಲೆ ಎಷ್ಟು ಶವಗಳಿಗೆ ಎಂಬುದು ಖಚಿತವಾಗಲಿದೆ. ಸೇತುವೆ ಕುಸಿದ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ಕಾರ್ ಅವಶೇಷ ಪತ್ತೆಯಾಗಿದ್ದು ಸ್ಥಳೀಯ ಆಡಳಿತಕ್ಕೆ ಮತ್ತು ಎನ್ಡಿಆರ್ಎಫ್ಗೆ ಕಾರ್ಯಾಚರಣೆಯ ಪ್ರಗತಿಯ ಕುರಿತು ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಎಂದು ಭಾರತೀಯ ನೌಕಾ ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ನಾಪತ್ತೆಯಾಗಿದ್ದ 2ನೇ ಬಸ್ಸಿನ ಅವಶೇಷ ಪತ್ತೆಯಾಗಿತ್ತು. ಕಾರಿನಲ್ಲಿರುವ ಮೃತದೇಹಗಳನ್ನು ಹೊರತುಪಡಿಸಿ ಇನ್ನೂ 12 ಜನರು ಕಾಣೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೂ 26 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕ ಸುಹಾಸ್ ದಿವಾಸೆ ತಿಳಿಸಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದ ಸಾರಿಗೆ ಸಂಸ್ಥೆ ಬಸ್ಸಿನಲ್ಲಿದ್ದ ಪ್ರಯಾಣಿಕರ ಕುಟುಂಬಸ್ಥರಿಗೆ ತಲಾ 14 ಲಕ್ಷ ರೂ. ಮತ್ತು ಇತರ ವಾಹನಗಳಲ್ಲಿದ್ದವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಮಂಡಳಿ ಘೊಷಿಸಿದೆ.
ಕಳೆದ 11 ದಿನಗಳ ಹಿಂದೆ ಸಂಭವಿಸಿದ ಈ ದುರ್ಘಟನೆಯಲ್ಲಿ ಎರಡು ಸರ್ಕಾರಿ ಬಸ್ಗಳು, 4-5 ಖಾಸಗಿ ವಾಹನಗಳು ಕೊಚ್ಚಿ ಹೋಗಿದ್ದು ಕನಿಷ್ಠ 42 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಇಲ್ಲಿಯವರೆಗೆ 26 ಶವಗಳು ಪತ್ತೆಯಾಗಿದ್ದು, ಅವುಗಳಲ್ಲಿ ಕೆಲವು ಸೇತುವೆ ಕುಸಿದ ಸ್ಥಳದಿಂದ 100 ಕೀಲೋಮೀಟರ್ ದೂರದ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿದ್ದವು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ