ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಾರಣಾಸಿ ಪ್ರವಾಸ ಭಾರಿ ಮಳೆಯಿಂದಾಗಿ ರದ್ದುಗೊಂಡ ಹಿನ್ನೆಲೆಯಲ್ಲಿ, ಜನತೆಯ ಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಶೋಭೆ ತರುವುದಿಲ್ಲ ಎಂದು ಉತ್ತರಪ್ರದೇಶದ ಸಚಿವ ಆಜಂ ಖಾನ್ ಹೇಳಿದ್ದಾರೆ.
ಎರಡನೇ ಬಾರಿಗೆ ಪ್ರಧಾನಿ ಮೋದಿಯವರ ಭೇಟಿ ರದ್ದಾಗಿರುವುದು ವಾರಣಾಸಿ ಜನತೆಯ ಅದೃಷ್ಠವೋ ಅಥವಾ ದುರಾದೃಷ್ಠವೋ ಗೊತ್ತಿಲ್ಲ, ಪ್ರಧಾನಿ ಸಾರ್ವಜನಿಕ ಸಭೆ ನಡೆಸಿ ಅಡಿಗಲ್ಲು ಶಂಕುಸ್ಥಾಪನೆ ನೆರವೇರಿಸುವ ಬದಲು ಪ್ರಧಾನಿ ಕಚೇರಿಯಲ್ಲಿಯೇ ಕುಳಿತು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಜನತೆಯ ಭಾವನೆಗಳೊಂದಿಗೆ ಆಟವಾಡುವುದರ ಬದಲು ಜನತೆಯನ್ನು ಗೌರವಿಸುವುದನ್ನು ಬಿಜೆಪಿ ಕಲಿಯುವುದು ಅಗತ್ಯವಾಗಿದೆ ಎಂದು ಖಾನ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾವತ್ತೂ ಪ್ರವಾಸವನ್ನು ರದ್ದುಗೊಳಿಸಿಲ್ಲ. ಎಂತಹದ್ದೆ ಹವಾಮಾನ ಪರಿಸ್ಥಿತಿಯಲ್ಲೂ ಪ್ರವಾಸ ಕೈಗೊಂಡು ಜನಪರ ಕಾರ್ಯಗಳನ್ನು ನೆರವೇರಿಸಿದ್ದಾರೆ.
ಮಳೆಯಿರಲಿ ಅಥವಾ ಪ್ರವಾಹದ ಪ್ರಕೋಪವಿರಲಿ ಯಾವುದಕ್ಕೂ ಕೇರ್ ಮಾಡದೆ ಜನತೆಯ ಪರವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಉತ್ತರಪ್ರದೇಶದ ಅಖಿಲೇಶ್ ಸಂಪುಟದ ಸಚಿವ ಆಜಂ ಖಾನ್ ಹೇಳಿದ್ದಾರೆ.