ಇಂದು ಕರ್ನಾಟಕವಷ್ಟೇ ಅಲ್ಲದ ಸಂಪೂರ್ಣ ಭಾರತ ದೇಶವಾಸಿಗಳು ಹೆಮ್ಮೆ ಪಡುವ ಅವಿಸ್ಮರಣೀಯ ದಿನ. ಬ್ರಿಟಿಷ್ ಪಾರ್ಲಿಮೆಂಟ್ ಎದುರುಗಡೆ, ಥೇಮ್ಸ್ ನದಿಯ ದಡದಲ್ಲಿ 12ನೇ ಶತಮಾನದ ಸಮಾಜ ಸುಧಾರಕ, ದಾರ್ಶನಿಕ, ಕ್ರಾಂತಿಯೋಗಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಇಂದು ಅನಾವರಣಗೊಳ್ಳಲಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು, ಕವಿ ರವೀಂದ್ರನಾಥ್ ಟಾಗೋರ್ ಬಳಿಕ ಬ್ರಿಟನ್ನಲ್ಲಿ ಅನಾವರಣಗೊಳ್ಳುತ್ತಿರುವ ಭಾರತೀಯ ಮೂಲದ ಮಹಾನ್ ವ್ಯಕ್ತಿಯ ಪ್ರತಿಮೆ ಬಸವಣ್ಣ ಅವರದ್ದೆನಿಸಲಿದೆ.
ಭಾರತೀಯ ಕಾಲಮಾನ ಮಧ್ಯಾಹ್ನ 3.15 ರ ಸುಮಾರಿಗೆ ಪ್ರಧಾನಿ ಮೋದಿ, ಕಾಯಕಯೋಗಿಯ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ 25 ನಿಮಿಷ ಪ್ರಧಾನಿ ನೆರೆದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಪ್ರಧಾನಿಯವರೊಬ್ಬರೆ ವೇದಿಕೆ ಮೇಲೆ ತೆರಳಿ ಮೂರ್ತಿಯನ್ನು ಅನಾವರಣಗೊಳಿಸಲಿದ್ದು, ಸ್ಥಳದಲ್ಲಿ ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಥೇಮ್ಸ್ ನದಿಯಲ್ಲಿ ದೋಣಿ ವಿಹಾರವನ್ನು ಸಹ ನಿಷೇಧಿಸಲಾಗಿದ್ದು, ಕಾರ್ಯಕ್ರಮ ಮುಗಿಯುವವರೆಗೆ ಆಗಸದಲ್ಲಿ ಹೆಲಿಕಾಫ್ಟರ್ ಗಸ್ತು ತಿರುಗಲಿವೆ.
ಜಗಜ್ಯೋತಿ ಬಸವೇಶ್ವರ 3.5 ಅಡಿ ಎತ್ತರದ ಪುತ್ಥಳಿಗೆ ಬರೋಬ್ಬರಿ 10 ಕೋಟಿ ರೂ. ವ್ಯಯಿಸಲಾಗಿದೆ. ಪ್ರತಿಮೆ ಸ್ಥಾಪಿಸಲು ಪ್ರಮುಖ ಕಾರಣೀಕರ್ತರಾದವರು ಲ್ಯಾಂಬೆತ್ನ ಮಾಜಿ ಮೇಯರ್, ಕನ್ನಡಿಗ ನೀರಜ್ ಪಾಟೀಲ್. ಮೂಲತಃ ಕಲಬುರಗಿ ಜಿಲ್ಲೆ ಕಮಲಾಪುರ ಗ್ರಾಮದವರಾದ ಪಾಟೀಲ್ ಹಲವು ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದಾರೆ.
ಬಸವಣ್ಣನ ಪುತ್ಥಳಿ ಸ್ಥಾಪನೆ ಭಾರತ ಮತ್ತು ಬ್ರಿಟನ್ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡಲು ಸಹಕಾರಿ ಎನ್ನುತ್ತಾರೆ ನೀರಜ್ ಪಾಟೀಲ್ ತಿಳಿಸಿದ್ದಾರೆ.