ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಿತ್ರೋದ್ಯಮಿ ಮುನಿರತ್ನ ಅವರ ಆಪ್ತರಾಗಿರುವ ಬಿಬಿಎಂಪಿ ಸಹಾಯಕ ಎಂಜಿನಿಯರ್ ವೆಂಡನ್ ಎಂಬುವವರ ನಿವಾಸದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಕಾಮಗಾರಿ ನಡೆಸದೇ ನಕಲಿ ಬಿಲ್ಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ವೆಂಡನ್ ಮೇಲಿತ್ತು. ತಮ್ಮ ವ್ಯಾಪ್ತಿಯಡಿ ಬರುವ ವಾರ್ಡ್ನಲ್ಲಿ ಸಂಗ್ರಹವಾಗಿದ್ದ ತೆರಿಗೆ ಹಣವನ್ನು ಬಿಬಿಎಂಪಿ ಕೇಂದ್ರ ಕಚೇರಿಗೂ ಪಾವತಿಸದೇ ವೆಂಡನ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಸಹ ದೂರು ಕೇಳಿ ಬಂದಿದೆ. ಅವರಿಗೆ ಬೆಂಬಲ ಕೊಟ್ಟ ಆರೋಪ ಮುನಿರತ್ನ ಅವರಿಗೂ ಅಂಟಿಕೊಂಡಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಹೇಶ್ ನೇತೃತ್ವದಲ್ಲಿ ವೆಂಡನ್ ಅವರ ನಿವಾಸದಲ್ಲಿ ಮಧ್ಯರಾತ್ರಿ 12 ಗಂಟೆಯವರೆಗೂ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ನಕಲಿ ದಾಖಲೆಗಳು ಹಾಗೂ ಬಿಲ್ಗಳು ದೊರೆತಿವೆ.
ಕಾಮಗಾರಿ ಪ್ರಾರಂಭಕ್ಕೂ ಮೊದಲೇ ಬಿಲ್ ಪಾಸ್ ಮಾಡಿಸಿ ಹಣ ಬಿಡುಗಡೆ ಮಾಡಿದ ಕಡತಗಳಿಗೆ ಶಾಸಕರ ಸಹಿ ಇರುವ ಕೆಲವು ದಾಖಲೆಗಳು ಸಹ ದೊರೆತಿವೆ.
ಪೊಲೀಸರು ವಶಪಡಿಸಿಕೊಂಡಿರುವ ಪರಿಶೀಲನೆಯಲ್ಲಿ ತೊಡಗಿದ್ದು, ಅಗತ್ಯಬಿದ್ದರೆ ವೆಂಡನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.