ಮಾಜಿ ರಾಯಭಾರಿ ಸುಧೀಂದ್ರ ಕುಲ್ಕರ್ಣಿಯವರ ಮೇಲೆ ಶಿವಸೇನೆ ಕಾರ್ಯಕರ್ತರು ಮಸಿ ಬಳೆದಿರುವ ಕೃತ್ಯ ಪ್ರಜಾಪ್ರಭುತ್ವಕ್ಕೆ ಮಾರಕ. ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ದೇಶದ ಜನತೆ ತಾಳ್ಮೆ ಕಳೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಯಾವುದೇ ಹೋರಾಟ ಕಾನೂನು ವ್ಯಾಪ್ತಿಯೊಳಗಿರಬೇಕು. ಇಂತಹ ಕೃತ್ಯ ಯಾರೇ ಎಸಗಿರಲಿ ಅಥವಾ ಯಾವುದೇ ಸಂಘಟನೆ ಎಸಗಿರಲಿ ಇದೊಂದು ಖಂಡನಾರ್ಹ ಕೃತ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೌರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶಿವಸೇನೆ ವಿರೋಧಿಸುತ್ತಿದೆ. ಆದರೆ,ಪುಸ್ತಕ ಬಿಡುಗಡೆ ನಡೆದೇ ತೀರುತ್ತದೆ ಎಂದು ಕಸೌರಿ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದರಿಂದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಕಸೌರಿಯವರ ಪುಸ್ತಕ ಬಿಡುಗಡೆ ಸಮಾರಂಭವನ್ನು ರದ್ದುಗೊಳಿಸಬೇಕು ಎಂದು ಶಿವಸೇನೆ, ನೆಹರು ಪ್ಲ್ಯಾನಿಟೋರಿಯಂ ಅಧಿಕಾರಿಗಳಿಗೆ ಪ್ರತಿಭಟನೆ ಸಲ್ಲಿಸಿತ್ತು.
ಒಂದು ವೇಳೆ ಸಮಾರಂಭ ನಡೆಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಿವಸೇನೆ ಎಚ್ಚರಿಸಿದೆ.