ಕೇರಳದ ಒಂದು ಬಿಜನೆಸ್ ಹೌಸ್ ತನ್ನ ನೇಮಕಾತಿ ಜಾಹಿರಾತಿನಲ್ಲಿ "ಮುಸ್ಲಿಂ ಮತ್ತು ಕ್ರೈಸ್ತರು' ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟನೆ ಹೊರಡಿಸಿರುವುದು ಆಘಾತಕಾರಿಯಾಗಿದೆ ಎಂದು ಭಾರತೀಯ ಜನತಾ ಪಕ್ಷ ಆತಂಕ ವ್ಯಕ್ತಪಡಿಸಿದೆ.
ಯಾವುದೇ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಕೆಯಿಂದ ಹಿಂದುಗಳನ್ನು ಹೊರಗಿಡುವುದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕೇರಳದ ಬಿಜೆಪಿ ರಾಜ್ಯ ಘಟಕದ ಸಂಯೋಜಕ ಬಿ.ಗೋಪಾಲಕೃಷ್ಣ ಆರೋಪಿಸಿದ್ದಾರೆ.
ಕೇರಳದ ಸೂಪರ್ಮಾರ್ಕೆಟ್ವೊಂದರಲ್ಲಿ ಕೆಲವು ಹುದ್ದೆಗಳ ನೇಮಕಾತಿ ಜಾಹೀರಾತು ಮಲಯಾಳಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಈ ಅರ್ಜಿಯಲ್ಲಿ ಕೇವಲ ಕ್ರೈಸ್ತರು ಮತ್ತು ಮುಸ್ಲಿಮರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ಭಾರತೀಯರೆಲ್ಲರಿಗೂ ಸಮಾನ ಅವಕಾಶ ದೊರೆಯಬೇಕು ಎನ್ನುವ ಸಂವಿಧಾನ ಕಲಂ 14ರ ಅನ್ವಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಜಾಹೀರಾತು ನೀಡಿದ ಕಂಪೆನಿಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಜಾಹೀರಾತು ಹಿಂಪಡೆಯುವಂತೆ ಒತ್ತಾಯಿಸಿದ್ದೇನೆ. ಆದರೆ, ಜಾಹಿರಾತು ಹಿಂಪಡೆಯಲು ಅವರು ನಿರಾಕರಿಸಿದ್ದರಿಂದ ಆಗಸ್ಟ್ 22 ರಂದು ಆಂದೋಲನೆ ನಡೆಸಲಾಗುವುದು ಎಂದು ಕೇರಳದ ಬಿಜೆಪಿ ರಾಜ್ಯ ಘಟಕದ ಸಂಯೋಜಕ ಬಿ.ಗೋಪಾಲಕೃಷ್ಣ ತಿಳಿಸಿದ್ದಾರೆ.