ಸ್ಪೋಟಕ ಸ್ಥಿತಿ ನೆಲೆಸಿರುವ ಕಾಶ್ಮೀರದ ಶ್ರೀನಗರದ ಹಳೆಯ ನಗರ ಭಾಗಗಳಲ್ಲಿ ಮತ್ತು ಕಣಿವೆಯ ಇತರೆ ಭಾಗಗಳಲ್ಲಿ ಕರ್ಫ್ಯೂ ರೀತಿಯ ನಿರ್ಬಂಧಗಳನ್ನು ಆಡಳಿತ ಹೇರಿದ್ದು, ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 75ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರದ ಸೊಪೋರ್ ಪಟ್ಟಣದ ವಾಡೂರಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಜತೆ ಘರ್ಷಣೆಗಳಲ್ಲಿ ಗಾಯಗೊಂಡ ಮುಸೈಬ್ ಮಜೀದ್(17) ಅದೇ ದಿನ ರಾತ್ರಿ ಶ್ರೀನಗರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಆಡಳಿತವು 6 ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಕರ್ಫ್ಯೂ ರೀತಿಯ ನಿರ್ಬಂಧಗಳನ್ನು ಹೇರಿದೆ. ಕಣಿವೆಯಲ್ಲಿ ಮಂಗಳವಾರ ಯಾವುದೇ ಜಾಗದಲ್ಲೂ ಕರ್ಫ್ಯೂ ವಿಧಿಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದರೂ, ನಿರ್ಬಂಧಗಳನ್ನು ಹೇರಿದ ಪ್ರದೇಶಗಳಲ್ಲಿ ಯಾವುದೇ ಪಾದಚಾರಿ ಅಥವಾ ವಾಹನಸಂಚಾರಕ್ಕೆ ಭದ್ರತಾ ಪಡೆಗಳು ಅವಕಾಶನೀಡುತ್ತಿಲ್ಲ. ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದ ಸರ್ವಪಕ್ಷ ನಿಯೋಗದ ಜತೆ ಮಾತುಕತೆಗೆ ಪ್ರತ್ಯೇಕತಾವಾದಿಗಳು ನಿರಾಕರಿಸಿದ ಬಳಿಕ ಶಾಂತಿ ಪ್ರಯತ್ನಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.