ಮೇಘಸ್ಪೋಟದ ಕಾರಣಕ್ಕೆ ಕಣಿವೆ ನಾಡು ಕಾಶ್ಮೀರದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ ಸಿಲುಕಿರುವ 500 ಕ್ಕೂ ಹೆಚ್ಚು ಕನ್ನಡಿಗರ ಪೈಕಿ ಒಂದೇ ಕುಟುಂಬದ 9 ಜನರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಚಿಕ್ಕಲ ಸಂದ್ರದ ನಿವಾಸಿಗಳಾದ ಕೃಷ್ಣಮೂರ್ತಿ ಗಂಗಾಧರ್ , ಅವರ ಪತ್ನಿ ವತ್ಸಲಾ, ಮಗ ಶ್ರೀಹರ್ಷ, ಸೊಸೆ ಪೂರ್ಣಿಮಾ, ಮೊಮ್ಮಗ ಶಂಶಾಕ್ ಮತ್ತು ಸಂಬಂಧಿಕರಾದ ಭಾರತಿ , ಮಂಜುನಾಥ್, ಸೀತಾಲಕ್ಷ್ಮೀ, ಕಿರಣ್ ಎನ್ನುವವರನ್ನು ಜವಾಹರ್ ನಗರದ ಗುಲ್ಶನ್ ಮಹಲ್ ಬಳಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಇವರೆಲ್ಲ ಸೆಪ್ಟಂಬರ್ 5 ರಿಂದ ನಾಪತ್ತೆಯಾಗಿದ್ದರು.
ಈಗ ಅವರೆಲ್ಲ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದು, ಇಂದು ಸಾಯಂಕಾಲದೊಳಗೆ ವಿಮಾನದ ಮೂಲಕ ಬೆಂಗಳೂರಿಗೆ ತಲುಪುವ ನಿರೀಕ್ಷೆ ಇದೆ.
ಭಾರೀ ಮಳೆ, ಪ್ರವಾಹದ ಕಾರಣ ಶ್ರೀನಗರದ 80% ಭಾಗದಲ್ಲಿ ವಿದ್ಯುತ್ ಸಂಪರ್ಕ ಮತ್ತು ಹಲವೆಡೆ ಮೊಬೈಲ್ ಸಂಪರ್ಕವೂ ಕೂಡ ಕಡಿತಗೊಂಡಿದೆ.
ಅಪಾಯದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗಾಗಿ ಈಗಾಗಲೇ ಐಎಎಸ್ ಅಧಿಕಾರಿ ರಮಣದೀಪ್ ಅವರ ನಿಯೋಗ ಕಾಶ್ಮೀರದಲ್ಲಿದ್ದು, ಇನ್ನೊಂದು ಆಯೋಗವು ಕೂಡ ಇಂದು ಶ್ರೀನಗರಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಹೇಳಲಾಗುತ್ತಿದೆ.