ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ 2016ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಡಿಎಂಕೆ ಪಕ್ಷದ ಖಜಾಂಚಿ ಮಾಜಿ ಉಪಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.
ಡಿಎಂಕೆ ಪಕ್ಷದ ಸಂಸ್ಥಾಪಕರಾದ ಇ.ವಿ.ಆರ್.ಪೆರಿಯಾರ್ ಮತ್ತು ಸಿ.ಎನ್.ಅಣ್ಣಾದೊರೈಯವರ ವರ್ಷಾಚರಣೆಯ ಅಂಗವಾಗಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ಕರುಣಾನಿಧಿ ಯಾವತ್ತು ನಮ್ಮ ಪಕ್ಷದ ನಾಯಕ. ಮುಂದಿನ 2016ರ ವಿಧಾನಸಭೆಯ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎನ್ನುವ ಪಕ್ಷದ ಕಾರ್ಯಕರ್ತರ ಬೇಡಿಕೆಗಳಿಗೆ ಅಂತ್ಯಹಾಡಿದ ಸ್ಟಾಲಿನ್, ಪಕ್ಷದಿಂದ ಅಮಾನತ್ತುಗೊಂಡ ಪಿ.ವಿ.ಕಲ್ಯಾಣಸುಂದರಂ ಮತ್ತು ಮಾಜಿ ಮುಖ್ಯಮಂತ್ರಿ ಕರುಣಾನಿಧಿಗೆ ಕೊಂಚ ಮಟ್ಟಿನ ನಿರಾಳತೆ ತಂದಿದ್ದಾರೆ.
ಡಿಎಂಕೆ ಪಕ್ಷದ ಮೇರು ನಾಯಕರಾಗಿದ್ದ ಇ.ವಿ.ಕೆ.ಸಂಪತ್, ಎಂ.ಜಿ.ರಾಮಚಂದ್ರನ್ ಮತ್ತು ವೈಕೋ ಪಕ್ಷವನ್ನು ತ್ಯಜಿಸಿದ ನಂತರವೂ ಕರುಣಾನಿಧಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ತಮಿಳುನಾಡಿನಲ್ಲಿ ಕರುಣಾನಿಧಿಯಂತಹ ಪ್ರಭಾವಿ ರಾಜಕಾರಣಿ ಮತ್ತೊಬ್ಬರಿಲ್ಲ ಎಂದು ಪುತ್ರ ಸ್ಟಾಲಿನ್ ಶ್ಲಾಘಿಸಿದ್ದಾರೆ.