ಲಿಬಿಯಾದಿಂದ ತಾಯ್ನಾಡಿಗೆ ಮರಳುವಾಗ ಐಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ ನಾಲ್ವರು ಭಾರತೀಯರ ಪೈಕಿ ಬಿಡುಗಡೆಯಾಗಿರುವ ಇಬ್ಬರು ಕನ್ನಡಿಗರು ಇಂದು ಸ್ವದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಲಿಬಿಯಾದಲ್ಲಿ ಉದ್ಯೋಗದಲ್ಲಿದ್ದ ರಾಯಚೂರಿನ ಲಕ್ಷ್ಮಿಕಾಂತ್, ಕೋಲಾರದ ವಿಜಯ್ ಕುಮಾರ್ ಹಾಗೂ ತೆಲಂಗಾಣದ ಇಬ್ಬರನ್ನು ಕಳೆದ 3 ದಿನಗಳ ಹಿಂದೆ ಐಸಿಸ್ ಉಗ್ರರು ಅಪಹರಿಸಿದ್ದರು. ಕನ್ನಡಿಗರಿಬ್ಬರನ್ನು ಬಿಡುಗಡೆ ಮಾಡಿರುವ ಉಗ್ರರು ಮತ್ತಿಬ್ಬರನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸದ್ಯ ಕನ್ನಡಿಗರಿಬ್ಬರು ಲಿಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದು ಇಂದು ಸಂಜೆಯೊಳಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸದ್ಯ ವಿಜಯ್ ಕುಮಾರ್ ಮತ್ತು ಲಕ್ಷ್ಮೀಕಾಂತ ಪರಿವಾರದಲ್ಲಿ ಸಂಭ್ರಮ ಮನೆ ಮಾಡಿದ್ದು ಕಾತರದಿಂದ ಕಾಯುತ್ತಿದ್ದಾರೆ.
ಮತ್ತಿಬ್ಬರು ಭಾರತೀಯರು ಬಿಡುಗಡೆಯಾಗದಿರುವುದು ಆತಂಕವನ್ನು ಸೃಷ್ಟಿಸಿದ್ದು, ಭಾರತದಲ್ಲಿ ಐಸಿಸ್ ದಾಳಿ ಶಂಕೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.