ಸೋದರಿ ಶೈಲಜಾ ಮತ್ತು ಅಣ್ಣ ವಾಸುದೇವನ್ ವಿರುದ್ಧ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಮದ್ರಾಸ್ ಕೋರ್ಟ್ನಲ್ಲಿ ಮೊಕದ್ದಮೆಯನ್ನು ದಾಖಲು ಮಾಡಿದ್ದಾರೆ. ತಮಿಳು ಪತ್ರಿಕೆ ಜೂನಿಯರ್ ವಿಕಟನ್ ಪತ್ರಿಕೆ ವಿರುದ್ಧ ಕೂಡ ಜಯಲಲಿತಾ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ತಮಿಳು ಪತ್ರಿಕೆಯಲ್ಲಿ ತಮ್ಮ ಬಗ್ಗೆ ವರದಿ ಪ್ರಕಟಿಸಿದ್ದಕ್ಕೆ ಅವರು ಕಿಡಿಕಿಡಿಯಾಗಿದ್ದಾರೆ. ಜಯಾ ಸಹೋದರಿ ಬೆಂಗಳೂರಿನಲ್ಲಿರುವ ಬಗ್ಗೆ ವರದಿಯಾಗಿದ್ದು, ಸಹೋದರಿ ಶೈಲಜಾ ಕೆಲವು ಟಿವಿ ವಾಹಿನಿಗಳಿಗೆ ಸಂದರ್ಶನ ನೀಡಿ ತಮ್ಮ ವ್ಯಥೆಯನ್ನು ಹೇಳಿಕೊಂಡಿದ್ದರು.
ಇದು ಕೂಡ ಶೈಲಜಾ ವಿರುದ್ಧ ಕೇಸ್ ಹಾಕಲು ಕಾರಣವೆನ್ನಲಾಗಿದೆ. ಈ ಕುರಿತು ವಾಸುದೇವನ್ ಪ್ರತಿಕ್ರಿಯಿಸಿ ಜಯಲಲಿತಾ ಅವರಿಗೆ ನೋವಾಗುವಂತೆ ಯಾವುದೇ ಮಾತನ್ನು ತಾವು ಹೇಳಿಲ್ಲ. ಸಂಬಂಧಿಕರ ಬಗ್ಗೆ ವರದಿ ಮಾಡಿದ್ದೇ ತಪ್ಪಾಯ್ತಾ, ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ಹಾಗಾಗಿದೆ. ಈ ರೀತಿಯಾಗಿ ನಮ್ಮ ವಿರುದ್ಧ ಜಯಾ ಕೇಸ್ ಹಾಕುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ವಾಸುದೇವನ್ ಹೇಳಿದ್ದಾರೆ.