ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪದಗ್ರಹಣ ಸಮಾರಂಭದಲ್ಲಿ ತಮ್ಮನ್ನು ಲಾಲು ಪ್ರಸಾದ್ ಯಾದವ್ ಬಲವಂತವಾಗಿ ತಬ್ಬಿಕೊಂಡಿದ್ದರು ಎಂದು ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಲಾಲು ಬಹಳ ತಡವಾಗಿಯಾದರೂ ಖಡಕ್ ತಿರುಗೇಟು ನೀಡಿದ್ದಾರೆ. ಬಲವಂತಾಗಿ ತಬ್ಬಿಕೊಳ್ಳಲು ಅವರೇನು ಸಿನಿಮಾ ಹೀರೋಯಿನ್ ಆ ಎಂದು ಲಾಲು ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.
ರೇವಾರಿಯ ಖಾಸಗಿ ಕಾಲೇಜೊಂದರಲ್ಲಿ ಆಯೋಜಿಸಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ನಾನು ಬಲವಂತವಾಗಿ ತಬ್ಬಿಕೊಂಡೆ ಎಂದು ಕೇಜ್ರಿವಾಲ್ ಹೇಳುತ್ತಾರೆ. ಬಲವಂತವಾಗಿ ತಬ್ಬಿಕೊಳ್ಳಲು ಅವರೇನು ಮುಂಬೈನ ಹಿರೋಯಿನ್ನಾ ಎಂದು ಅವರು ಪ್ರಶ್ನಿಸಿದ್ದಾರೆ.
ಮೇವು ಹಗರಣದಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಲಾಲು ಅವರು ಚುನಾವಣೆಯಲ್ಲೂ ಸ್ಪರ್ಧಿಸದಂತಾಗಿದೆ. ಅಂಥವರೊಂದಿಗೆ ಕೇಜ್ರಿವಾಲ್ ಆತ್ಮೀಯವಾಗಿ ನಡೆದುಕೊಂಡಿದ್ದಕ್ಕೆ ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟೀಕೆಗಳು ವ್ಯಕ್ತವಾಗಿದ್ದವು.
ಇದಕ್ಕೆ ಸಮಜಾಯಿಷಿ ನೀಡಿದ್ದ ಕೇಜ್ರಿ, ವೇದಿಕೆ ಮೇಲೆ ಸುಮ್ಮನೆ ನಿಂತಿದ್ದ ತಮ್ಮನ್ನು ಲಾಲೂ ಅವರೇ ಬಲವಂತವಾಗಿ ತಬ್ಬಿಕೊಂಡರು ಎಂದು ತಿಳಿಸಿದ್ದರು.
ವಿವಿಐಪಿ ಹೆಲಿಕಾಪ್ಟರ್ ಖರೀದಿ ಪ್ರಕರಣ ಸಂಬಂಧಪಟ್ಟಂತೆ, ಸೋನಿಯಾ ಗಾಂಧಿ ಅವರನ್ನು ಬಂಧಿಸುವಂತೆ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿರುವ ಅರವಿಂದ್ ಕೇಜ್ರಿವಾಲ್ ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ಲಾಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಪರ ಬ್ಯಾಟ್ ಬೀಸಿರುವ ಲಾಲು, ಸೋನಿಯಾ ಗಾಂಧಿ ಪ್ರಾಮಾಣಿಕಳಲ್ಲವೆಂದಾದರೆ ಈ ದೇಶದಲ್ಲಿ ಮತ್ಯಾರು ಕೂಡ ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.