"ಇಂಡಿಯನ್ ಮುಜಾಹಿದೀನ್ ಒಂದು 'ಸಾಂಪ್ರದಾಯಿಕ ಸಂಘಟನೆ', ಇದರ ಸದಸ್ಯರು ಭಯೋತ್ಪಾದಕರಲ್ಲ", ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಖುರ್ಷಿದ್ ಅಹ್ಮದ್ ಸೈಯದ್ ಹೇಳಿದ್ದಾರೆ.
ಐಎಂ ಒಂದು ಉಗ್ರಗಾಮಿ ಸಂಘಟನೆ ಎಂದು ಭಾರತ ಮತ್ತು ಅಮೇರಿಕಾದ ಸರ್ಕಾರದಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿದೆ.
ಗೋವಾ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಅಹ್ಮದ್ ಸೈಯದ್, "ಮುಸ್ಲಿಮ್ ಭಯೋತ್ಪಾದಕರು ಜಗತ್ತಿನ ಇತರೆಡೆಗಳಲ್ಲಿ ಇರಬಹುದು. ಆದರೆ ಭಾರತೀಯ ಮೂಲದ ಮುಸ್ಲಿಮರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ", ಎಂದಿದ್ದಾರೆ.
ಭಾರತೀಯ ಮುಸ್ಲಿಮರು ಮೂಲಭೂತವಾದವನ್ನು ಪ್ರತಿಪಾದಿಸುವುದಿಲ್ಲ ಎಂದು ಗುಜರಾತ್ ಮೂಲತ ಕಾಂಗ್ರೆಸ್ ನಾಯಕ ಸೈಯದ್ ಒತ್ತಿ ಹೇಳಿದ್ದಾರೆ.
ಪುಣೆ (2010), ವಾರಣಾಸಿ (2010), ಮುಂಬೈ ಸರಣಿ ಸ್ಫೋಟ (2011) ರಲ್ಲಿ ಬಾಂಬ್ ಸೇರಿದಂತೆ ದೇಶದಲ್ಲಿ ನಡೆದ ಸುಮಾರು 10 ದಾಳಿ ಪ್ರಕರಣಗಳಲ್ಲಿ ಐಎಂ ಹೆಸರಿದೆಯಲ್ಲ ಎಂದು ಪ್ರಶ್ನಿಸಿದಾಗ ಅದಕ್ಕೆ ಸೈಯದ್ "ಕೆಲವು ಸಂಘಟನೆಗಳು ಅಸಂಬದ್ಧವಾಗಿ ಮಾತನಾಡುತ್ತಿವೆ. ಸುಳ್ಳು ಆರೋಪ ಹೊರಿಸುತ್ತಿವೆ. ಆದರೆ ಐಎಮ್ ಭಯೋತ್ಪಾದಕ ಸಂಘಟನೆಯಲ್ಲ", ಎಂದು ಪುನರುಚ್ಚಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2010ರಲ್ಲಿಯೇ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.