Select Your Language

Notifications

webdunia
webdunia
webdunia
webdunia

ಬಿಹಾರ್: 12 ಗಂಟೆಗಳಲ್ಲಿಯೇ ಇಬ್ಬರು ಪ್ರಮುಖ ಬಿಜೆಪಿ ನಾಯಕರ ಹತ್ಯೆ

ಬಿಹಾರ್: 12 ಗಂಟೆಗಳಲ್ಲಿಯೇ ಇಬ್ಬರು ಪ್ರಮುಖ ಬಿಜೆಪಿ ನಾಯಕರ ಹತ್ಯೆ
ಪಾಟ್ನಾ , ಶುಕ್ರವಾರ, 12 ಫೆಬ್ರವರಿ 2016 (21:32 IST)
ಬಿಹಾರ್ ರಾಜ್ಯದ ಬಿಜೆಪಿ ಉಪಾಧ್ಯಕ್ಷ ವಿಶ್ವೇಶ್ವರ್ ಓಝಾರನ್ನು ಕೆಲ ಅಪರಿಚಿತ ವ್ಯಕ್ತಿಗಳು ಇಂದು ಸಂಜೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬೆಳಿಗ್ಗೆ ಛಾಪ್ರಾ ಜಿಲ್ಲೆಯಲ್ಲಿ ಮತ್ತೊಬ್ಬ ಬಿಜೆಪಿ ನಾಯಕ ಕೇದಾರ್‌ನಾಥ್ ಸಿಂಗ್‌ನನ್ನು ಕೂಡಾ ಗುಂಡಿಟ್ಟು ಹತ್ಯೆ ಮಾಡಲಾಗಿದೆ 
 
ಪಾಟ್ನಾದಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ಓಝಾ, ಪರಸೌರಾ ಗ್ರಾಮದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುತ್ತಿರುವ ಸಂದರ್ಭದಲ್ಲಿ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
 
ಓಝಾ ಕಾರು ಚಾಲಕ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ವಿಶ್ವೇಶ್ವರ್ ಓಝಾ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಅಜಯ್ ಕುಮಾರ್ ತಿಳಿಸಿದ್ದಾರೆ.
 
ಘಟನೆಯಲ್ಲಿ ಗಾಯಗೊಂಡ ಇತರ ಇಬ್ಬರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
 
ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಮಂಗಲ್ ಪಾಂಡೆ ಸೇರಿದಂತೆ ಹಲವು ನಾಯಕರು, ಓಝಾ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
 
ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಬಗ್ಗೆ ಸಭೆ ನಡೆಸುತ್ತಿದ್ದಾರೆ. ಆದರೆ, ಅಪರಾಧಿಗಳು ನಿಯಂತ್ರಣದಿಂದ ಮುಕ್ತರಾಗಿದ್ದಾರೆ. ಇದೊಂದು ಹೇಯ ಕೃತ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಕಿಡಿಕಾರಿದ್ದಾರೆ.

Share this Story:

Follow Webdunia kannada