ಅಧಿಕಾರ ಸ್ವೀಕರಿಸಿದ ಪ್ರಾರಂಭದ ದಿನವೇ ಭಾರತೀಯ ಸೇನೆಯ ನೂತನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಸುಹಾಗ್, ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದು, ಕಳೆದ ಬಾರಿ ನಡೆದ ಸೈನಿಕರ ಶಿರಚ್ಛೇದದಂಥ ಘಟನೆಗಳು ಮರುಕಳಿಸಿದರೆ ಸಾಕಷ್ಟು ತೀವ್ರ ಮತ್ತು ತಕ್ಷಣದ ಪರಿಣಾಮ " ವನ್ನು ಎದುರಿಸಬೇಕಾಗುವುದು ಎಂದು ಗುಡುಗಿದ್ದಾರೆ.
ಕಳೆದ ಗುರುವಾರ ಸೇವೆಯಿಂದ ನಿರ್ಗಮಿಸುತ್ತಿದ್ದ ವೇಳೆ ಮಾತನಾಡುತ್ತಿದ್ದ ಭೂಸೇನೆಯ ಮುಖ್ಯಸ್ಥ ಜನರಲ್.ಬಿಕ್ರಂ ಸಿಂಗ್ ಜನವರಿ 2013ರಲ್ಲಿ ನಮ್ಮ ಸೈನಿಕನ ಶಿರಚ್ಛೇದದ ನಂತರ ನಾವು ಯೋಗ್ಯ ಉತ್ತರವನ್ನೇ ನೀಡಿದ್ದೆವು ಎಂದು ಹೇಳಿದ್ದರು.
ನಾವು ಬಳಸುವ ಸೈನಿಕ ಬಲ ಯುದ್ಧತಂತ್ರದಿಂದ ಕಾರ್ಯಾಚರಣೆವರೆಗಿನ ಕಾರ್ಯತಂತ್ರಗಳನ್ನು ಒಳಗೊಂಡಿರುತ್ತದೆ . ಶಿರಚ್ಛೇದ ಘಟನೆ ಸಮಯದಲ್ಲಿ ನಾವು ಮಾಡಬೇಕಿದ್ದುದು ಕಾರ್ಯಾಚರಣೆಯ ಮಟ್ಟದ ಕೆಲಸವಾಗಿತ್ತು. ಅದನ್ನು ನಾವು ಮಾಡಿದ್ಧೇವೆ. ನನಗೆ ತಿಳಿದ ಮಟ್ಟಿಗೆ ಅದನ್ನು ಸ್ಥಳೀಯ ಕಮಾಂಡರ್ ಅವರೇ ಮಾಡಿರುತ್ತಾರೆ. ಅದರಲ್ಲಿ ಸೇನಾ ಮುಖ್ಯಸ್ಥನ ಪಾತ್ರವಿರುವುದಿಲ್ಲ ಎಂದು ಜ.ಬಿಕ್ರಂ ಸಿಂಗ್ ತಿಳಿಸಿದ್ದರು.
ಗುರುವಾರ ಅಧಿಕಾರ ವಹಿಸಿಕೊಂಡ ಜನರಲ್ ಸುಹಾಗ್ ಅವರಿಗೆ ಯೋಗ್ಯ ಉತ್ತರ ಏನು ಎಂಬ ಪ್ರಶ್ನೆಯನ್ನು ಕೇಳಲಾಯಿತು.
ಹೊಸ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡ ಸಂತಸದ ಗಳಿಗೆಯಲ್ಲಿ ಸೈನಿಕರಿಂದ ಸ್ವಾಗತದ ಗೌರವ ಪಡೆದುಕೊಂಡ ನಂತರ ಮಾತನಾಡುತ್ತಿದ್ದ ಅವರು "ಈ ಕುರಿತು ನನ್ನ ಪೂರ್ವಾಧಿಕಾರಿ ನಿನ್ನೆ ತಾನೇ ಮನವರಿಕೆ ಮಾಡಿಸಿದ್ದಾರೆ. ಭವಿಷ್ಯದಲ್ಲಿ ಮತ್ತೆ ಅಂತಹ ದುರ್ವರ್ತನೆಗಳು ಮರುಕಳಿಸಿದರೆ ನಮ್ಮ ಪ್ರತಿಕ್ರಿಯೆ ತೀವ್ರ ಮತ್ತು ತಕ್ಷಣದ ಪರಿಣಾಮವನ್ನುಂಟು ಮಾಡುವಂತದ್ದಾಗಲಿದೆ" ಎಂದು ಪಾಕ್ ಅಧಿಕ ಪ್ರಸಂಗಿತನಕ್ಕೆ ಎಚ್ಚರಿಗೆ ಘಂಟಾನಾದವನ್ನು ಕೇಳಿಸಿದ್ದಾರೆ.