ಐಎಎಸ್ ಅಧಿಕಾರಿ ಡಿಕೆ ರವಿಯವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡ ಸಮಾಜ ಎಂಬ ಸ್ವಯಂ ಸೇವಾ ಸಂಸ್ಥೆ ಡಿಕೆ ರವಿಯವರ ರವಿಯವರ ಪತ್ನಿಯ ತಂದೆ, ಕಾಂಗ್ರೆಸ್ ನಾಯಕ ಹನುಮಂತರಾಯಪ್ಪನವರ ಮೇಲೆ ದೂರು ದಾಖಲಿಸಿದ್ದು ಅವರು ಸಾಕ್ಷ್ಯವನ್ನು ನಾಶ ಪಡಿಸಿದ್ದಾರೆ ಎಂದು ಆರೋಪಿಸಿದೆ.
ತಮ್ಮ ಮನೆಯಲ್ಲಿನ ಸಿಸಿಟಿವಿ ಫೂಟೆಜ್ಗಳನ್ನು ಅನುಮತಿ ಕೇಳದೇ ಕೊಂಡೊಯ್ದ ಸಿಐಡಿ ಪೊಲೀಸರು ಅದರಲ್ಲಿನ ಕೆಲವು ದೃಶ್ಯಾವಳಿಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಆರೋಪಿಸಿದ್ದ ಹನುಮಂತರಾಯಪ್ಪನವರು ಆ ಕುರಿತು ದೂರು ದಾಖಲಿಸಿಲ್ಲ. ಇಡೀ ರಾಜ್ಯವೇ ರವಿಯವರ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿದ್ದರೆ ಹನುಮಂತರಾಯಪ್ಪನವರು ಇಂತಹ ದೊಡ್ಡ ತಪ್ಪು ನಡೆದಿದ್ದರೂ ಸುಮ್ಮನಿದ್ದಾರೆ ಎಂದು ವಿಶ್ವ ಕನ್ನಡ ಸಮಾಜದ ಸ್ಥಾಪಕ ಎಸ್. ಆನಂದ ಆರೋಪಿಸಿದ್ದಾರೆ.
ತಮ್ಮ ಮನೆಯಲ್ಲಿನ ಸಿಸಿಟಿವಿ ಫೂಟೇಜ್ನ್ನು ಕೊಂಡೊಯ್ದಿದ್ದ ಸಿಐಡಿ ಪೊಲೀಸರು ಅದರಲ್ಲಿ ರವಿ ಸಾವಿನ ದಿನದ ದೃಶ್ಯಾವಳಿಗಳನ್ನು ಅಳಿಸಿ ಕೊಟ್ಟಿದ್ದಾರೆಂದು ಹನುಮಂತರಾಯಪ್ಪ ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ ಈ ಕುರಿತು ದೂರು ದಾಖಲಿಸಿರಲಿಲ್ಲ.
ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿರುವುದರಿಂದ ಆನಂದ್ ನೀಡಿರುವ ದೂರನ್ನು ಕೇಂದ್ರ ತನಿಖಾ ಸಂಸ್ಥೆಗೆ ವರ್ಗಾಯಿಸಲು ನಗರ ಪೊಲೀಸರು ನಿರ್ಧರಿಸಿದ್ದಾರೆ.