ಹುಡ್ಹುಡ್ ಚಂಡಮಾರುತ ಸೃಷ್ಟಿಸಿದ ಅನಾಹುತ, ನಷ್ಟಕ್ಕೆ ಸಂತೋಷ ವ್ಯಕ್ತಪಡಿಸಿ ಫೇಸ್ಬುಕ್ನಲ್ಲಿ ಸಂದೇಶ ಪೋಸ್ಟ್ ಮಾಡಿದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸದಸ್ಯನೊಬ್ಬ ಈಗ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಾನೆ.
"ಪಾಪ ಕರ್ಮ ಮಾಡಿದವರಿಗೆ, ಪ್ರಕೃತಿಯೇ ಪಾಠ ಕಲಿಸುತ್ತದೆ, ದೇವರಿದ್ದಾನೆ ಎಂಬ ಭಾವನೆ ಬಲಗೊಂಡಿದೆ. ಐ ಲವ್ ಯೂ ಹುಡ್ಹುಡ್" ಎಂದು ಗುಂಟೂರಿನ ಸಿ ರಾಹುಲ್ ರೆಡ್ಡಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ವಾರ ಆಂಧ್ರಪ್ರದೇಶ ಸರ್ಕಾರ , ಕೇಂದ್ರ ಸರ್ಕಾರಕ್ಕೆ ನೀಡಿರುವ ವರದಿಯ ಪ್ರಕಾರ ರಾಜ್ಯ ಎದುರಿಸಿದ ತೀವ್ರ ಸ್ವರೂಪದ ಚಂಡಮಾರುತದಿಂದ ಕನಿಷ್ಠ 46 ಜನರು ಸಾವನ್ನಪ್ಪಿದ್ದರು ಮತ್ತು 43 ಮಂದಿ ಗಾಯಗೊಂಡಿದ್ದಾರೆ. 20,93 ಲಕ್ಷ ಕುಟುಂಬಗಳು ಈಗಲೂ ಇದರ ಭೀಕರ ಪರಿಣಾಮವನ್ನೆದುರಿಸುತ್ತಿದ್ದಾರೆ ಮತ್ತು ಸುಮಾರು 3000 ಪ್ರಾಣಿಗಳು ಸಾವನ್ನಪ್ಪಿವೆ.
ಹುಡ್ಹುಡ್ 22,14 ಲಕ್ಷ ಟನ್ ಆಹಾರ ಧಾನ್ಯಗಳು ಮತ್ತು 6,89 ಟನ್ ತೋಟಗಾರಿಕಾ ಬೆಳೆಗಳನ್ನು ಸೇರಿದಂತೆ ಕಟಾವಿಗೆ ಬಂದಿದ್ದ, 2.37 ಲಕ್ಷ ಹೆಕ್ಟೇರ್ ಕೃಷಿಭೂಮಿಯನ್ನು ಧ್ವಂಸಗೊಳಿಸಿದೆ. ನಾಲ್ಕು ಜಿಲ್ಲೆಗಳ ಸುಮಾರು 5000 ಕ್ಕೂ ಹೆಚ್ಚಿನ ಹಳ್ಳಿಗಳು ಈ ನೈಸರ್ಗಿಕ ವೈಪರೀತ್ಯದ ಪರಿಣಾಮಕ್ಕೆ ತುತ್ತಾಗಿದ್ದು 40,000 ಮನೆಗಳು ಹಾನಿಗೊಳಗಾಗಿವೆ.
ಆಂಧ್ರ ಸರ್ಕಾರದ ವರದಿಯ ಪ್ರಕಾರ ರಾಜ್ಯದ 317 ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ 455 ಕಟ್ಟಡಗಳು ಹುಡ್ಹುಡ್ನಿಂದ ಹಾನಿಗೊಳಗಾಗಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂಚಿತವಾಗಿ ಎಚ್ಚರಿಕೆ ನೀಡದೆ ಇದ್ದಿದ್ದರೆ ಹುಡ್ಹುಡ್ ಪರಿಣಾಮ ಮತ್ತೂ ತೀವೃ ಸ್ವರೂಪದ್ದಾಗಿರುತ್ತಿತ್ತು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.