ಇಂದು ಸಹ ರಾಜ್ಯಸಭೆ ಕೋಲಾಹಲಕ್ಕೆ ಸಾಕ್ಷಿಯಾಯಿತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಕಳೆದೆರಡು ದಿನಗಳ ಹಿಂದೆ ಮಾಡಿದ್ದ ಭರ್ಜರಿ ಭಾಷಣದಲ್ಲಿ ದುರ್ಗಾಮಾತೆಗೆ ಅವಮಾನ ಮಾಡುವಂತಹ ಉಲ್ಲೇಖಗಳಿದ್ದ ಪತ್ರವನ್ನು ಓದಿ ದುರ್ಗಾಮಾತೆಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದರೆ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಅವರು ಉಗ್ರ ಅಫ್ಜಲ್ ಗುರುವಿನ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಬಗ್ಗೆ ಚರ್ಚೆಗೆ ಬಿಜೆಪಿ ಒತ್ತಾಯಿಸಿತು.
ಆದರೆ ಕ್ಷಮೆ ಕೇಳಲು ನಿರಾಕರಿಸಿದ ಸಚಿವೆ ಸ್ಮೃತಿ ನಾನು ಕೂಡ ಹಿಂದೂ ಧರ್ಮಾನುಯಾಯಿ, ದುರ್ಗಾಮಾತೆ ಭಕ್ತೆ. ನಾನದನ್ನು ಅತ್ಯಂತ ನೋವಿನೊಂದಿಗೆ ಓದಿದ್ದೇನೆ. ಇದು ಬಿಜೆಪಿ ಸರ್ಕಾರದ ಕಡತವಲ್ಲ. ಜೆಎನ್ಯುದ ಅಧಿಕೃತ ದಾಖಲೆ.ನಿಮ್ಮ ವಾದಕ್ಕೆ ಸಾಕ್ಷ್ಯವೇನೆಂದು ಕೇಳಿದ್ದರಿಂದ ಸತ್ಯವನ್ನು ತಿಳಿಸಲು ನಾನಿದನ್ನು ಓದಬೇಕಾಯಿತು. ನಾನು ದುರ್ಗಾಮಾತೆಗೆ ಅಪಮಾನ ಮಾಡಿಲ್ಲ, ಕ್ಷಮೆ ಕೇಳಲಾರೆ ಎಂದು ಸಚಿವೆ ಸಮಜಾಯಿಸಿ ನೀಡಬೇಕಾಯಿತು.