ನಾನು ಅಹಂಕಾರಿಯಲ್ಲ, ಆದರೆ ಸ್ವಾಭಿಮಾನಿ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜನತಾ ಪರಿವಾರ ಒಂದು ವೇಳೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಲ್ಲಿ ಕೇಂದ್ರ ಸರಕಾರದ ಪ್ಯಾಕೇಜ್ಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನೀಡಿದ ಹೇಳಿಕೆಗೆ ಕಿಡಿಕಾರಿದ ನಿತೀಶ್, ರಾಜ್ಯದ ಅಭಿವೃದ್ಧಿಗಾಗಿ ಸಂಪನ್ಮೂಲ ಹೆಚ್ಚಿಸುವ ಸಾಮರ್ಥ್ಯ ನನಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರಕಾರದ ಸಚಿವರು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಆದರೆ, ಬರಗಾಲದಿಂದ ಕಂಗಾಲಾಗಿರುವ ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಯು ಪಕ್ಷದ ಅಭ್ಯರ್ಥಿಗಳಾದ ದಾಮೋದರ್ ರೌವತ್, ಡಾ.ರವೀಂದ್ರ ಯಾದವ್ ಪರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ನಿತೀಶ್, ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು ಸಮಾಜವನ್ನು ಇಬ್ಬಾಗಿಸುವ ಕೃತ್ಯದಲ್ಲಿ ತೊಡಗಿದೆ. ಇಂತಹ ಪಕ್ಷವನ್ನು ತಿರಸ್ಕರಿಸಿ ಎಂದು ಕರೆ ನೀಡಿದರು.