ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ನೇತೃತ್ವದ ಸರಕಾರ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ ಕೋಟಿ ಕೋಟಿ ಬೆಲೆಬಾಳುವ 2 ಸಾವಿರ ಚದುರ ಮೀಟರ್ ಭೂಮಿಯನ್ನು ಕೇವಲ 70 ಸಾವಿರ ರೂಪಾಯಿಗಳಿಗೆ ನೀಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಕಳೆದ ಡಿಸೆಂಬರ್ 29 ರಂದು ಕಂದಾಯ ಸಚಿವ ಏಕನಾಥ್ ಖಾಡ್ಸೆ ನೃತ್ಯ ಮತ್ತು ಸಂಗೀತ ಶಾಲೆಯನ್ನು ಆರಂಭಿಸಲು 2 ಸಾವಿರ ಚದುರ ಮೀಟರ್ ಭೂಮಿಯನ್ನು ನೀಡುವಂತೆ ಆದೇಶಿಸಿರುವುದು ವಿಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿದೆ.
ಮುಂಬೈನ ಪಶ್ಚಿಮ ಅಂಧೇರಿಯ ಅಂಬಿವಲಿ-ಒಶಿವಾರಾ ಪ್ರದೇಶದಲ್ಲಿ ಹೇಮಾಮಾಲಿನಿಗೆ ಮಹಾರಾಷ್ಟ್ರ ಸರಕಾರ ಭೂಮಿ ನೀಡಿದೆ.
ಮಹಾರಾಷ್ಟ್ರ ಸರಕಾರ ಪ್ರತಿ ಚದುರ ಮೀಟರ್ ಭೂಮಿಯನ್ನು ಕೇವಲ 35 ರೂಪಾಯಿಗಳಿಗೆ ನಿಗದಿಪಡಿಸಿ, 70 ಸಾವಿರ ರೂಪಾಯಿಗಳಿಗೆ 2 ಸಾವಿರ ಚದುರ ಮೀಟರ್ ಭೂಮಿಯನ್ನು ನೀಡಿ ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿಗಳಷ್ಟು ಹಾನಿ ಉಂಟು ಮಾಡಿದೆ ಎಂದು ಆರ್ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಸಂಸದ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಕೂಡಾ ತಮ್ಮ ಭೂಮಿಗೆ ಸರಕಾರದಿಂದ ಕಡಿಮೆ ದರದಲ್ಲಿ ಭೂಮಿಯನ್ನು ಪಡೆದಿದ್ದರು. ನಂತರ ಭಾರಿ ಫ್ರತಿಭಟನೆ ವ್ಯಕ್ತವಾದಾಗಾ ಭೂಮಿಯನ್ನು ಮರಳಿಸಿದ್ದರು. ಮತ್ತೊಂದು ಟ್ವಿಸ್ಟ್ ಎಂದರೆ ಹೇಮಾಮಾಲಿನಿ ಕೂಡಾ ಹಿಂದೆ ಪಡೆದ ಸರಕಾರ ಭೂಮಿಯನ್ನು ಪ್ರತಿಭಟನೆಗಳಿಗೆ ಬೆದರಿ ವಾಪಸ್ ನೀಡಿದ್ದರು.
ಬಿಜೆಪಿ ಸಂಸದೆ ಹೇಮಾಮಾಲಿಗೆ ನೀಡಿದ ಭೂಮಿ ಉದ್ಯಾನವನಕ್ಕಾಗಿ ಮೀಸಲಾಗಿಡಲಾಗಿದೆ. ಉದ್ಯಾನವನಕ್ಕಾಗಿ ಮೀಸಲಾಗಿದ್ದ ಭೂಮಿಯನ್ನು ಹೇಮಾಮಾಲಿನಿ ಒತೆಡನಕ್ಕೆ ನೀಡುತ್ತಿರುವುದು ಕಾನೂನುಬಾಹಿರ. 1997ರ ಏಪ್ರಿಲ್ 4 ರಂದು ಅಂಧೇರಿಯ ವರ್ಸೋವಾ ಗ್ರಾಮದಲ್ಲಿ 10 ಲಕ್ಷ ರೂಪಾಯಿಗಳ ದರ ನಿಗದಿಪಡಿಸಿ ಸರಕಾರಿ ಭೂಮಿಯನ್ನು ನೀಡಲಾಗಿತ್ತು ಎಂದು ಗಲಗಲಿ ತಿಳಿಸಿದ್ದಾರೆ.