ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ತನಿಖೆಯ ಸುಳಿಯಲ್ಲಿ ಸಿಲುಕಿ ಕೊಂಡಿರುವ ಕಾಂಗ್ರೆಸ್ ಸಂಸದ ತರೂರ್ ಮಾಧ್ಯಮಗಳ ವಿರುದ್ಧ ಮತ್ತು ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವ ತಮ್ಮದೇ ಪಕ್ಷದ ಕೆಲ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ದೇಶದ ಕಾನೂನನ್ನು ಹೊರತು ಪಡಿಸಿ ಇನ್ಯಾರು ಕೂಡ ನನ್ನ ಹಣೆಬರಹವನ್ನು ಬರೆಯಲಾರರು ಎಂದು ಅವರು ಹೇಳಿದ್ದಾರೆ.
ನಾವು ನಮ್ಮ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಹೊಂದಿದ್ದೇವೆ. ಸಮಾಜಕ್ಕೆ ಸಂಬಂಧಿಸಿದಂತೆ ಕೂಡ ನಿಯಮಗಳನ್ನು ಹೊಂದಿದ್ದೇವೆ. ನಾನು ಕಾನೂನಿಗೆ ಗೌರವ ನೀಡುತ್ತೇನೆ. ಈ ಮೊದಲು ಸಹ ನಾನು ಅದನ್ನೇ ಮಾಡಿದ್ದೇನೆ ಎಂದಿದ್ದಾರೆ ತರೂರ್.
ರಾಜಕಾರಣಿಯಾಗಿ ತಮ್ಮ ವೃತ್ತಿಜೀವನ ಕಳಂಕವಿಲ್ಲದು ಎಂದಿರುವ ತರೂರ್ ತಮ್ಮ ರಾಜೀನಾಮೆಗೆ ಕೇಳಿಬರುತ್ತಿರುವ ಒತ್ತಾಯ 'ಅಸಂಬದ್ಧ' ಎಂದಿದ್ದಾರೆ.
ಹಿರಿಯ ನಾಯಕ ಪಿಸಿ ಚಾಕೋ ಸೇರಿದಂತೆ ತಮ್ಮದೇ ಪಕ್ಷದ, ಹಲವರು ತಮ್ಮನ್ನು ಸಂಸದನ ಸ್ಥಾನದಿಂದ ಕೆಳಗಿಳಿಯುವಂತೆ ಬೇಡಿಕೆ ಇಡುತ್ತಿದ್ದು, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅವರಿಂದ ಸ್ಪಷ್ಟನೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.