ಪಂಜಾಬ್ನ ಗುರುದಾಸಪುರ ಜಿಲ್ಲೆಯ ದೀನಾನಗರದಲ್ಲಿ ಶಂಕಿತ ಉಗ್ರರು ಅಟ್ಟಹಾಸ ಮೆರೆದಿದ್ದು ಘಟನೆಯಲ್ಲಿ ಮೂವರು ನಾಗರಿಕರು ದುರ್ಮರಣವನ್ನಪ್ಪಿದ್ದಾರೆ. ಅಲ್ಲದೆ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ಗಡಿಯಲ್ಲೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸೇನಾ ಸಮವಸ್ತ್ರ ಧರಿಸಿ ಗುರುದಾಸಪುರದಿಂದ ಜಮ್ಮುವಿನ ಕಡೆಗ ಹೊರಟಿದ್ದ ಬಸ್ ಒಳಕ್ಕೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ. ಪರಿಣಾಮ ಮೂವರು ಪ್ರಯಾಣಿಕರು ಮೃತಪಟ್ಟು ಉಳಿದ ನಾಲ್ವರು ಗಾಯಗೊಂಡಿದ್ದಾರೆ.
ನಂತರ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಮಾಡಿ ಆತ ಕಾರ್ನ್ನು ಎಗರಿಸಿಕೊಂಡು ಹೊರಟ ಉಗ್ರರು ದೀನಾನಗರ್ ಪೊಲೀಸ್ ಠಾಣೆಯೊಳಕ್ಕೆ ನುಗ್ಗಿ ಫೈರಿಂಗ್ ಆರಂಭಿಸಿದ್ದಾರೆ. ಪೊಲೀಸರ ಕುಟುಂಬದ ಸದಸ್ಯರನ್ನು ಒತ್ತೆಯಾಳಾಗಿಕೊಂಡು ದಾಳಿಯನ್ನು ಮುಂದುವರೆಸಿದ್ದಾರೆ.
ಪೊಲೀಸ್ ಠಾಣೆಯಲ್ಲೀಗ ಉಗ್ರರು ಮತ್ತು ಪೊಲೀಸರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಉಗ್ರರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಿವೆಯೆಂದು
ಹೇಳಲಾಗುತ್ತಿದೆ.
ಉಗ್ರರ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚಿರಬಹುದೆಂದು ಭಾವಿಸಲಾಗಿದೆ. ಉಗ್ರರನ್ನು ಸದೆ ಬಡಿಯಲು ಜಿಲ್ಲಾಡಳಿತ ಭಾರತೀಯ ಸೇನೆಯ ನೆರವು ಕೋರಿದೆ.
ಘಟನೆ ಬಗ್ಗೆ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ ಜತೆ ಚರ್ಚೆ ನಡೆಸಿದ್ದಾರೆ.
ಇಲ್ಲಿಯವರೆಗೆ ಯಾವ ಉಗ್ರ ಸಂಘಟನೆಯೂ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
ಇನ್ನೊಂದೆಡೆ ಗುರುದಾಸ್- ಪಠಾನ್ ಕೋಟ್ ರೈಲ್ವೆ ಹಳಿಗಳ ಮೇಲೆ 5 ಸಜೀವ ಬಾಂಬ್ಗಳು ಪತ್ತೆಯಾಗಿವೆ.