ಪಟೇಲ್ ಸಮುದಾಯದ ಪ್ರತಿಭಟನೆಗೆ ಗುಜರಾತ್ ಸರಕಾರದ ನೀತಿಗಳೇ ಕಾರಣವಾಗಿವೆ ಎಂದು ವಿಶ್ವ ಹಿಂದೂ ಪರಿಷದ್ನ ಅಂತಾರಾಷ್ಟ್ರೀಯ ಕಾರ್ಯದರ್ಶಿ ಡಾ.ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಪಟೇಲ್ ಸಮುದಾಯಕ್ಕೆ ಸೇರಿದ ತೊಗಾಡಿಯಾ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡದಿರುವುದು, ಅಭಿವೃದ್ಧಿಗೆ ಮನ್ನಣೆ ನೀಡದಿರುವುದು ಹಾಗೂ ಸಾಲದ ಬಾಧೆಯಿಂದ ಕಂಗಾಲಾದ ರೈತರಿಗೆ ಸಾಂತ್ವನ ಹೇಳದಿರುವುದು ಗುಜರಾತ್ ಸರಕಾರದ ವೈಫಲ್ಯಗಳಾಗಿವೆ ಎಂದು ಹೇಳಿದ್ದಾರೆ.
ವಿಶ್ವ ಹಿಂದು ಸಮಾಚಾರ ಪತ್ರಿಕೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದ ಅವರು, ಗುಜರಾತ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳು ದೇಶಕ್ಕೆ ಕಳವಳಕಾರಿಯಾಗಿದ್ದು ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಯುವಕರು ಮತ್ತು ರೈತರು ಸಂಪೂರ್ಣವಾಗಿ ಹತಾಶೆಗೊಂಡಿರುವುದೇ ಪ್ರಮುಖ ಕಾರಣವಾಗಿದೆ. ಗುಜರಾತ್ ಸರಕಾರ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಪ್ರವೀಣ್ ತೊಗಾಡಿಯಾ ಸಲಹೆ ನೀಡಿದ್ದಾರೆ.