ಹಣ ಕೊಡಲು ನಿರಾಕರಿಸಿದ ಕಾರಣಕ್ಕೆ ನಿರುದ್ಯೋಗಿ ಯುವಕನೊಬ್ಬ ತನ್ನ ಅಜ್ಜ- ಅಜ್ಜಿಯರನ್ನೇ ಕೊಂದ ಕರಾಳ ಘಟನೆ ಗುಜರಾತ್ನ ನರ್ಮದಾ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ 30 ವರ್ಷದ ಅಕ್ಷಯ್ ಯಾದವ್ ಕೆಲಸಕ್ಕೆ ಹೋಗುತ್ತಿರಲಿಲ್ಲ. ಪ್ರತಿನಿತ್ಯದ ಖರ್ಚಿಗೆ ಆತ ತನ್ನ ಅಜ್ಜಿ- ಅಜ್ಜಿಯ ಬಳಿ ಹಣ ಕೇಳುತ್ತಿದ್ದ. ಎಂದಿನಂತೆ ಮಂಗಳವಾರ ಆತ ಹಣ ಕೇಳಿದಾಗ ಅನಾವಶ್ಯಕವಾಗಿ ಖರ್ಚು ಮಾಡಬೇಡ ಎಂದಿದ್ದ ಹಿರಿಯರು ಹಣ ಕೊಡಲು ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ.
ದೊಣ್ಣೆಯಿಂದ ತಲೆಗೆ ಹೊಡೆದ ಆತ ಅವರಿಬ್ಬರು ನೆಲಕ್ಕುರುಳಿದ ಮೇಲೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಅಲ್ಲಿಂದ ಪರಾರಿಯಾಗಿದ್ದಾನೆ. ಮರುದಿನ ತಂದೆ-ತಾಯಿಗಳನ್ನು ಭೇಟಿಯಾಗಲು ಬಂದ ಆರೋಪಿಯ ಚಿಕ್ಕಪ್ಪ ಅವರು ಕೊಲೆಯಾಗಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.