ಬೆಂಗಳೂರು: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಾರ್ಟಿ, ಈಗ ದೇಶದ ಉದ್ದಗಲಕ್ಕೂ ತನ್ನ ಕಾರ್ಯ ಬಾಹುವನ್ನು ಚಾಚಲು ರಾಜಕೀಯ ಯೋಜನೆ ರೂಪಿಸಿಕೊಂಡಿದೆ.
ಮುಂಬರುವ ಮಾರ್ಚ್ ನಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಅಲ್ಲಿ ತನ್ನ ಪಕ್ಷದಿಂದ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂದು ಗಂಭೀರ ಚಿಂತನೆ ನಡೆಸಿದೆ. ಈಗಾಗಲೇ ಅಲ್ಲಿ ಆಪ್ ಪಕ್ಷದ ಅಭ್ಯರ್ಥಿಯಾಗಿ ಗುರುತಿಸಿಕೊಂಡು ಚುನಾವಣೆ ಕಣಕ್ಕಿಳಿಯಲು ತೀವ್ರ ಪೈಪೋಟಿ ನಡೆದಿದೆ. ಆದರೆ, ಭ್ರಷ್ಟ ಹಾಗೂ ಕಳಂಕ ರಹಿತ ವ್ಯಕ್ತಿಗಳಿಗೆ ಮಾತ್ರ ಟಿಕೇಟ್ ನೀಡಬೇಕೆನ್ನುವುದು ಪಕ್ಷದ ವರಿಷ್ಠರ ತೀರ್ಮಾನವಾಗಿದೆ. ಈ ಹಿನ್ನಲೆಯಲ್ಲಿ ಗೋವಾ ಆಪ್ ಮುಖಂಡರ ಜತೆ ದೆಹಲಿಯ ವರಿಷ್ಠರು ಡಿಸೆಂಬರ್ ತಿಂಗಳಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಗೋವಾ ರಾಜಕೀಯದಲ್ಲಿ ಕಾಂಗ್ರೆಸ್-ಬಿಜೆಪಿಯ ಹಾವು ಏಣಿ ಆಟದಲ್ಲಿ ಆಮ್ ಆದ್ಮಿ ಏಣಿಯಾಗಲು ಹೊರಟಿದ್ದು, ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದು ಚುನಾವಣೆಯ ಫಲಿತಾಂಶದ ನಂತರವೇ ತಿಳಿಯಬೇಕು.
ಇನ್ನು ಮೋದಿ ಪ್ರಧಾನಿ ಹುದ್ದೆಗೆ ಏರಲು ಕಾರಣವಾದ ಗುಜರಾತ್ ವಿಧಾನ ಸಭಾ ಚುನಾವಣೆಯೂ 2017ರಲ್ಲಿ ನಡೆಯಲಿದ್ದು, ದೆಹಲಿಯಲ್ಲಾದ ವ್ಯತಿರಿಕ್ತ ಫಲಿತಾಂಶವನ್ನೇ ಅಲ್ಲಿಯೂ ನೀಡುವ ಉದ್ದೇಶ ಇಟ್ಟುಕೊಂಡಿದೆ. ಇದು ಮೇಲ್ನೋಟಕ್ಕೆ ತಿರುಕನ ಕನಸು ಎಂದೆನಿಸಿದರೂ, ಯಾವುದೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಕಣ್ಣಮುಂದೆಯೇ ದೆಹಲಿ ಚುನಾವಣಾ ಫಲಿತಾಂಶವಿದೆ. ಆದರೆ, ಅಲ್ಲಿರುವ ಬಿಜೆಪಿಯ ಮಹಾ ಗೋಡೆಯನ್ನು ಉರುಳಿಸಲು ಕಾಂಗ್ರೆಸ್ ಕೂಡಾ ಸಾಕಷ್ಟು ಬೆವರಳಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ. ವಿಷಯ ಹಾಗಿದ್ದಾಗ ದೆಹಲಿಯೊಂದರಲ್ಲಿಯೇ ಆಡಳಿತದ ಚುಕ್ಕಾಣಿ ಹಿಡಿದು ಹಿರಿಹಿರಿ ಹಿಗ್ಗುತ್ತಿರುವ ಆಪ್ಗೆ ಆ ಗೋಡೆ ಉರುಳಿಸುವುದು ಅಷ್ಟೊಂದು ಸುಲಭವಲ್ಲ. ಜತೆಗೆ ಪ್ರಧಾನಿ ಮೋದಿಗೆ ತನ್ನ ರಾಜ್ಯ ಪ್ರತಿಷ್ಠೆಯ ಕಣವಾಗಿ ಬಿಂಬಿತವಾಗುವುದುರಿಂದ, ಅವರು ಅಷ್ಟೊಂದು ಸುಲಭವಾಗಿ ಚುನಾವಣೆಯನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದು ಗಮನಾರ್ಹ.
ಅದೇ ರೀತಿ ಕರ್ನಾಟಕದಲ್ಲಿಯೂ ಆಪ್ ತನ್ನ ಕಬಂಧ ಬಾಹುವನ್ನು ಚಾಚಲು ಈಗಲೇ ಯೋಜನೆ ರೂಪಿಸಿದೆ. ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಭ್ರಷ್ಟ ರಹಿತ ಆಡಳಿತ ನೀಡುವ ಭರವಸೆಯನ್ನು ಕಾರ್ಯಕರ್ತರಲ್ಲಿ ತುಂಬಿ, ಅವರನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಬಿಟ್ಟು ಆಮ್ ಆದ್ಮಿಯ ಧ್ಯೇಯೋದ್ದೇಶ ಏನು ಎನ್ನುವುನ್ನು ಮನವರಿಕೆ ಮಾಡಿಸುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವ ಸಚಿವ ಸಂಪುಟದಲ್ಲಿದ್ದ ಕೆಲವು ಸಚಿವರು ಹಾಗೂ ಶಾಸಕರು ಕೆಲವು ಆರೋಪದಿಂದ ಬಂಧನವಾಗಿರುವುದು ಚುನಾವಣೆಗೆ ಹಿನ್ನೆಡೆಯೇ. ಅಲ್ಲದೆ, ಪಕ್ಷದ ಮುಖಂಡ ಕೇಜ್ರಿವಾಲರ ಕೆಲವು ರಾಜಕೀಯ ಮತ್ತು ಸೈನ್ಯಕ್ಕೆ ಸಂಬಂಧಿಸಿದ ವ್ಯತಿರಿಕ್ತ ಹೇಳಿಕೆಗಳ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಸುಳ್ಳಲ್ಲ. ಇವುಗಳ ಜೊತೆಗೆ, ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ವಿರುದ್ಧ ಅವರದ್ದೇ ಪಕ್ಷದ ಕಾರ್ಯಕ್ರತರೊಬ್ಬರು ಭ್ರಷ್ಟಾಚಾರದ ಆರೋಪ ಮಾಡಿದ್ದು ಬಲವಾದ ಪೆಟ್ಟು ನೀಡುವುದರಲ್ಲಿ ಎರಡು ಮಾತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ