ಮುಂಬೈನ ಶಹಾಪುರ್ ಪ್ರದೇಶದ ನಿವಾಸಿಯಾದ 21 ವರ್ಷ ವಯಸ್ಸಿನ ಯುವತಿಯನ್ನು ಮೂವರು ಆರೋಪಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೇ ಹತ್ಯೆ ಮಾಡಿದ ದಾರುಣ ಘಟನೆ ವರದಿಯಾಗಿದೆ.
ಶಹಾಪುರದ ಹದಾವಲಿ ಗ್ರಾಮದವಳಾಗಿದ್ದ ಯುವತಿಯನ್ನು ಮೇ 1 ರಂದು ತೀರ್ಥಯಾತ್ರೆಯ ನೆಪವೊಡ್ಡಿ ಶಿರ್ಡಿ ನಗರಕ್ಕೆ ಕರೆದುಕೊಂಡು ಹೋದ ಆರೋಪಿಗಳಾದ ಗೋರಖ್ ದಸಾಡೆ, ರಾಹುಲ್ ದಾಸಾಡೆ ಮತ್ತು ಅಪರಿಚಿತ ಮಹಿಳೆಯೊಬ್ಬಳು ಮೇ 1 ರಿಂದ ಮೇ 3 ರವರೆಗೆ ಅತ್ಯಾಚಾರವೆಸಗಿ ನಂತರ ಆಕೆಯ ಮೃತ ದೇಹವನ್ನು ಮರಳಿ ಶಹಾಪುರ್ಗೆ ತೆಗೆದುಕೊಂಡು ಬಂದು ಹತ್ತಿರದಲ್ಲಿರುವ ನದಿಯಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿ ಎಂ.ಬಿ.ಸಕಾಳೆ ತಿಳಿಸಿದ್ದಾರೆ.
ದಾರಿಹೋಕರು ನದಿಯ ದಂಡೆಯ ಮೇಲೆ ಬಿದ್ದಿದ್ದ ಯುವತಿಯ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಯುವತಿಯ ಸಹೋದರ, ಶವ ತನ್ನ ಸಹೋದರಿಯದ್ದಾಗಿದೆ ಎಂದು ಗುರುತಿಸಿದ್ದಾನೆ. ನಂತರ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾನೆ. ಇಂದು ಬೆಳಿಗ್ಗೆ ಪೊಲೀಸರು ಆರೋಪಿ ಗೋರಕ್ ದಸಾಡೆನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಪೊಲೀಸರು ಆರೋಪಿಗಳ ವಿರುದ್ಧ ಅತ್ಯಾಚಾರ, ಅಪಹರಣ, ಹತ್ಯೆ ಸೇರಿದಂತೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ