ನವದೆಹಲಿ:ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹತ್ಯೆಯ ಹಿಂದೆ ಮತ್ತೊಬ್ಬ ಕೊಲೆಗಾರನೂ ಇದ್ದನೇ ? ಗಾಂಧೀಜಿಯವರಿಗೆ ಗೋಡ್ಸೆ ಹೊರತಾಗಿ ಇನ್ನೊಬ್ಬ ವ್ಯಕ್ತಿಯೂ ಗುಂಡು ಹಾರಿಸಿದ್ದನೇ? ಎಂಬಿತ್ಯಾದಿ ಹಲವು ಪ್ರಶ್ನೆಗಳು ಈಗ ಉದ್ಭವವಾಗಿವೆ ಇದಕ್ಕೆ ಕಾರಣ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿರುವ ಹೊಸದೊಂದು ಅರ್ಜಿ.
ಪೊಲೀಸ್ ತನಿಖೆ ಪ್ರಕಾರ, ನಾಥುರಾಮ್ ಗೋಡ್ಸೆ ಹಾರಿಸಿದ ಮೂರು ಗುಂಡುಗಳು ಗಾಂಧೀಜಿ ಅವರ ದೇಹದಲ್ಲಿ ಸಿಕ್ಕಿವೆ. ಆದರೆ ಗೋಡ್ಸೆಯ ಹೊರತಾಗಿ ಬೇರೆಯವರು ಹಾರಿಸಿದ ನಾಲ್ಕನೇ ಗುಂಡೂ ಇತ್ತೇ ಎಂಬ ಪ್ರಶ್ನೆ ಅರ್ಜಿಯಲ್ಲಿ ಕೇಳಲಾಗಿದೆ.
ಮುಂಬೈನ ಅಭಿನವ್ ಭಾರತ್ನ ಟ್ರಸ್ಟಿ ಮತ್ತು ಸಂಶೋಧಕರೂ ಆಗಿರುವ ಡಾ. ಪಂಕಜ್ ಫಡ್ನಿಸ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಹಿಂದೆ ನಡೆದ ತನಿಖೆಯು ದೊಡ್ಡದೊಂದು ಪ್ರಕರಣವನ್ನು ಮುಚ್ಚಿಹಾಕುವ ಯತ್ನವಾಗಿತ್ತೇ ಮತ್ತು ಪ್ರಕರಣದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ದೂರಲು ಸಮರ್ಪಕ ಕಾರಣಗಳಿದ್ದವೇ ಎಂದು ಕೇಳಲಾಗಿದೆ.
ಗಾಂಧಿ ಹತ್ಯೆಯ ಹಿಂದಿರುವ ಪಿತೂರಿ ಬಯಲಿಗೆಳೆಯಲು ಹೊಸ ತನಿಖಾ ಆಯೋಗ ರಚಿಸುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.